ನವದೆಹಲಿ: ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣ ನೀಡಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಖಾತೆಯನ್ನು ಟ್ವಿಟರ್ ಕೆಲ ಕಾಲ ಅಮಾನತ್ತಿನಲ್ಲಿ ಇಟ್ಟಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತು ಸರಣಿ ಟ್ವೀಟ್ ಮಾಡಿದ್ದ ಕಂಗನಾ, ಮಮತಾ ಕುರಿತು ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಾರೆ. ಮೇ 2ರಂದು ಹೊರಬಿದ್ದ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಬಳಿಕ ಬಂಗಾಳದಲ್ಲಿ ಉಂಟಾಗಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಮತಾರನ್ನು ಟೀಕಿಸಿ ಕಂಗನಾ ಟ್ವೀಟ್ ಮಾಡಿದ್ದರು.
ಫಲಿತಾಂಶದಲ್ಲಿ ಮಮತಾ ನೇತೃತ್ವದ ಟಿಎಂಸಿ ಗೆದ್ದ ಬೆನ್ನಲ್ಲೇ ಬಂಗಾಲದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕಂಗನಾ ಒತ್ತಾಯಿಸಿದ್ದರು. ಅಲ್ಲದೆ, ಮಮತಾರನ್ನು ರಾಕ್ಷಸಿಗೆ ಹೋಲಿಸಿ ಕಂಗನಾ ಟ್ವೀಟ್ ಮಾಡಿದ್ದರು. ಬಿಜೆಪಿ ಗೆಲುವು ಸಾಧಿಸಿದ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಯಾವುದೇ ಹಿಂಸಾಚಾರ ನಡೆಯುತ್ತಿಲ್ಲ. ಆದರೆ, ನೂರಾರ ಕೊಲೆಗಳು ಟಿಎಂಸಿ ಗೆದ್ದ ಬಳಿಕ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ ಎಂದು ದೂಷಿಸಿ ಬಂಗಾಳ ಸುಡುತ್ತಿದೆ (#Bengalisburning) ಎಂದು ಟ್ವೀಟ್ ಮಾಡಿದ್ದರು.
ವಿರಾಟ ರೂಪವನ್ನು ಉಪಯೋಗಿಸಿ ಮಮತಾ ಬ್ಯಾನರ್ಜಿ ಅವರನ್ನು ಪಳಗಿಸಿ ಎಂದು ಪ್ರಧಾನಿ ಮೋದಿಯನ್ನು ಕಂಗನಾ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್)