ಇದುವರೆಗೂ ಸುಶಾಂತ್ ಸಿಂಗ್ ರಜಪೂತ್ ಬೆಂಬಲಕ್ಕೆ ನಿಂತು, ಬಾಲಿವುಡ್ನಲ್ಲಿ ಸಿಕ್ಕಸಿಕ್ಕವರಿಗೆಲ್ಲಾ ಬೈದಿದ್ದ ಕಂಗನಾ ರಣಾವತ್, ಈಗ ‘ಕಮಾಂಡೋ’ ಖ್ಯಾತಿಯ ನಟ ವಿದ್ಯುತ್ ಜಾಮ್ವಾಲ್ ಪರ ನಿಂತಿದ್ದಾರೆ. ವಿದ್ಯುತ್ಗೆ ನ್ಯಾಯ ಸಿಗಬೇಕು ಮತ್ತು ಆತನನ್ನು ಹೊರಗಿನವನ ತರಹ ನೋಡಬಾರದು ಎಂದು ಕಂಗನಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಇನ್ನಷ್ಟು ಕೋಟಿ ಬಾಚಿಕೊಂಡ ಪ್ರಿಯಾಂಕಾ … ಅಮೇಜಾನ್ ಜತೆಗೆ ಹೊಸ ಡೀಲ್
ಇಷ್ಟಕ್ಕೂ ಆಗಿದ್ದೇನೆಂದರೆ, ಡಿಸ್ನಿ ಹಾಟ್ಸ್ಟಾರ್ನಲ್ಲಿ ನಿನ್ನೆ ಮಂಗಳವಾರ ಅರ್ಧ ಡಜನ್ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತವೆ ಎಂದು ಘೋಷಣೆಯಾಗಿವೆ. ಅಕ್ಷಯ್ ಕುಮಾರ್ ಅಭಿನಯದ ‘ಲಕ್ಷ್ಮೀ ಬಾಂಬ್’, ಅಜಯ್ ದೇವಗನ್ ಅಭಿನಯದ ‘ಭುಜ್ – ದಿ ಪ್ರೈಡ್ ಆಫ್ ಇಂಡಿಯಾ’, ಸಂಜಯ್ ದತ್ ಅಭಿನಯದ ‘ಸಡಕ್ 2’, ಅಭಿಷೇಕ್ ಬಚ್ಚನ್ ಅಭಿನಯದ ‘ದಿ ಬಿಗ್ ಬುಲ್’, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರ ‘ದಿಲ್ ಬೇಚಾರ’, ವಿದ್ಯುತ್ ಜಾಮ್ವಾಲ್ ಅಭಿನಯದ ‘ಖುದಾ ಹಾಫಿಜ್’ ಮತ್ತು ಕುನಾಲ್ ಖೇಮು ಅಭಿನಯದ ‘ಲೂಟ್ಕೇಸ್’ ಚಿತ್ರಗಳನ್ನು ಮುಂದಿನ ದಿನಗಳಲ್ಲಿ ಒಂದರಹಿಂದೊಂದು ಬಿಡುಗಡೆ ಮಾಡುವುದಾಗಿ ಡಿಸ್ನಿ ಹಾಟ್ಸ್ಟಾರ್ ಹೇಳಿದೆ.
ಈ ಪೈಕಿ ಐದು ಚಿತ್ರಗಳ ವರ್ಚುಯಲ್ ಪತ್ರಿಕಾ ಗೋಷ್ಠಿ ನಡೆದಿದೆ. ಈ ಪತ್ರಿಕಾ ಗೋಷ್ಠಿಗೆ ಅಭಿಷೇಕ್ ಬಚ್ಚನ್, ಅಜಯ್ ದೇವಗನ್, ಆಲಿಯಾ ಭಟ್, ವರುಣ್ ಧವನ್, ಅಕ್ಷಯ್ ಕುಮಾರ್ ಮುಂತಾದವರು ಭಾಗವಹಿಸಿದ್ದಾರೆ. ಆದರೆ, ವಿದ್ಯುತ್ ಜಾಮ್ವಾಲ್ ಮತ್ತು ಕುನಾಲ್ ಖೇಮುಗೆ ಮಾತ್ರ ಆಹ್ವಾನವಿರಲಿಲ್ಲ.
ದೊಡ್ಡ ಸ್ಟಾರ್ಗಳನ್ನು ಕರೆದು, ಇವರಿಬ್ಬರನ್ನು ಬಿಟ್ಟಿದ್ದರ ಬಗ್ಗೆ ಬಾಲಿವುಡ್ನಲ್ಲಿ ಸಾಕಷ್ಟು ಅಪಸ್ವರ ಕೇಳಿ ಬಂದಿತ್ತು. ನಟಿ ಜೆನಿಲಿಯಾ ಡಿಸೋಜಾ ಸಹ ವಿದ್ಯುತ್ ಸಪೋರ್ಟ್ಗೆ ಬಂದಿದ್ದರು. ‘ಪ್ರತಿ ಚಿತ್ರ ಸಹ ಪ್ರೀತಿ ಮತ್ತು ಬೆವರಿನಿಂದ ಮಾಡಲಾಗುತ್ತದೆ. ಆ ಚಿತ್ರದಲ್ಲಿ ಕೆಲಸ ಮಾಡಿರುವವರು ಅದರ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆ ಚಿತ್ರದ ಸಮಾರಂಭಕ್ಕೆ ಆಹ್ವಾನ ನೀಡುವುದು ಬೇಡ, ಕನಿಷ್ಠ ಅವರಿಗೆ ವಿಷಯವನ್ನಾದರೂ ತಿಳಿಸಬಹುದಿತ್ತು. ಅದೂ ಮಾಡಿಲಿಲ್ಲ ಎಂದರೆ ತಪ್ಪು. ವಿದ್ಯುತ್, ಬೇಸರ ಬೇಡ. ಹೆಜ್ಜೆ ಹಾಕುತ್ತಿರು’ ಎಂದು ಧೈರ್ಯ ತುಂಬಿದ್ದರು.
ಇದನ್ನೂ ಓದಿ: ‘777 ಚಾರ್ಲಿ’ ಬಳಗ ಸೇರಿದ ದಾನಿಶ್ ಸೇಠ್
ಈಗ ಕಂಗನಾ ಸಹ ವಿದ್ಯುತ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಕಂಗನಾ ಎನ್ನುವುದಕ್ಕಿಂತ ಅವರ ಪ್ರಚಾರದ ಕುರಿತು ನೋಡಿಕೊಳ್ಳುತ್ತಿರುವ ಅವರ ತಂಡ, ಟ್ವೀಟ್ ಮಾಡುವ ಮೂಲಕ ವಿದ್ಯುತ್ಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ‘ಗಾಡ್ಫಾದರ್ಗಳು ಇಲ್ಲದವರನ್ನು ಚಿತ್ರರಂಗ ನೋಡುವ ರೀತಿಯೇ ಬೇರೆ. ಅವರನ್ನು ಚಿತ್ರರಂಗ ಯಾವತ್ತೂ ಹೊರಗಿನವರು ಎಂದು ಗುರುತಿಸುತ್ತದೆ. ಇಷ್ಟು ವರ್ಷಗಳಾದರೂ, ಈ ರೀತಿ ಅವಮಾನ ಮಾಡುವುದು ದೊಡ್ಡ ಶೇಮ್’ ಎಂದು ಟೀಮ್ ಕಂಗನಾ ರಣಾವತ್ ಟ್ವೀಟ್ ಮಾಡಿದೆ.
ಇನ್ನು ತಮಗಾದ ಅನ್ಯಾಯದ ಬಗ್ಗೆ ವಿದ್ಯುತ್ ಜಾಮ್ವಾಲ್ ಸಹ ಬೇಸರ ಮಾಡಿಕೊಂಡಿದ್ದಾರೆ. ಆಹ್ವಾನ ಕೊಡದಿದ್ದರೂ, ಪತ್ರಿಕಾಗೋಷ್ಠಿಯ ಬಗ್ಗೆ ತಿಳಿಸಬಹುದಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೇಸರ ತೋಡಿಕೊಂಡಿದ್ದಾರೆ.