ಕನಕಗಿರಿ: ತಾಲೂಕಿನಲ್ಲಿ 1500 ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿದ್ದು, ಸಂಘದ ಸಭೆ ನಡೆಸಲು ಸ್ವಂತ ಕಟ್ಟಡವಿಲ್ಲ. ಹೀಗಾಗಿ ನಿವೇಶನ ನೀಡುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಸೋಮವಾರ ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಮಹ್ಮದಸಾಬ್ ಅಗರಬತ್ತಿ ಮಾತನಾಡಿ, ಕನಕಗಿರಿ ತಾಲೂಕಿನಲ್ಲಿ 20 ವರ್ಷಗಳಿಂದ ಕಟ್ಟಡ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರು ಯಾವುದೇ ಸಂಘದ ಸಭೆ, ಸಮಾರಂಭ ನಡೆಸಿ ಚರ್ಚಿಸಲು ಸ್ವಂತ ಕಟ್ಟಡವಿಲ್ಲವಾಗಿದೆ. ಬಯಲಿನಲ್ಲೇ ಸಭೆ ನಡೆಸುವಂತಾಗಿದೆ. ಹೀಗಾಗಿ 50*60 ಅಡಿಯ ನಿವೇಶನ ನೀಡಿದರೆ, ಶಾಸಕರು ಹಾಗೂ ಸಂಸದರ ಅನುದಾನದಲ್ಲಿ ಕಚೇರಿ ಹಾಗೂ ಸಭಾಂಗಣ ನಿರ್ಮಿಸಿಕೊಳ್ಳುತ್ತೇವೆ ಎಂದು ತಿಳಿಸಿದರು. ತಾಪಂ ಮಾಜಿ ಅಧ್ಯಕ್ಷ ಹೊನ್ನೂರಸಾಬ್ ಮೇಸ್ತ್ರಿ, ಸಂಘದ ಕಾರ್ಯದರ್ಶಿ ಟಿ.ರಾಜಾಸಾಬ್, ಉಪಾಧ್ಯಕ್ಷ ಚನ್ನಬಸವ ಸೂಡಿ, ಖಜಾಂಚಿ ರಾಮಣ್ಣ ಬ್ಯಾಳಿ, ಕಂಠೆಪ್ಪ ಮಡಿವಾಳ, ಖಾದರಸಾಬ್ ಗುಡಿಹಿಂದ್ಲ ಇತರರಿದ್ದರು.