ಕನಕಗಿರಿ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಎನ್ನೆಸ್ಸೆಸ್ ಬಳ್ಳಾರಿ ವಿಭಾಗಾಧಿಕಾರಿ ಬಸಪ್ಪ ನಾಗೋಲಿ ಹೇಳಿದರು.
ತಾಲೂಕಿನ ಕರಡೋಣ ಗ್ರಾಮದಲ್ಲಿ ಸ್ಥಳೀಯ ಕೆಪಿಎಸ್ ಕಾಲೇಜು ವಿಭಾಗದಿಂದ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮ ಶತಮಾನೋತ್ಸವ ವರ್ಷವಾದ 1969ರಲ್ಲಿ ಎನ್ನೆಸ್ಸೆಸ್ ಪ್ರಾರಂಭಿಸಲಾಗಿದೆ. ಸಮುದಾಯ ಸೇವೆ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳಿಸುವುದು ಯೋಜನೆ ಉದ್ದೇಶವಾಗಿದೆ. ಅದಕ್ಕಾಗಿ ಪದವಿ, ಪಿಯು ಕಾಲೇಜುಗಳಲ್ಲಿ ಎನ್ನೆಸ್ಸೆಸ್ ಯುವ ಜನರ ಸಂಘ ರಚಿಸಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲಾಗುತ್ತಿದೆ ಎಂದರು.
ಪಿಡಿಒ ನಾಗಲಿಂಗಪ್ಪ ರ್ಯಾವಣಕಿ ಮಾತನಾಡಿ, ಮಹಾತ್ಮ ಗಾಂಧೀಜಿ ಆಶಯದಂತೆ ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಪ್ರಗತಿ ಆದಂತೆ. ಈ ಹಿನ್ನೆಲೆಯಲ್ಲಿ ಗ್ರಾಮದ ಪ್ರಗತಿ, ಸ್ವಚ್ಛತೆ, ಸಾರ್ವಜನಿಕ ಜಾಗೃತಿ ಆಂದೋಲನಕ್ಕೆ ಈ ಯೋಜನೆ ಸ್ಫೂರ್ತಿಯಾಗಿದೆ ಎಂದರು.
ಪ್ರಭಾರ ಪ್ರಾಚಾರ್ಯ ಮಾರೆಪ್ಪ ಎನ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಿಯು ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರಗೌಡ, ಗ್ರಾಪಂ ಅಧ್ಯಕ್ಷ ಹಿರೇ ಹನುಮಂತಪ್ಪ ಗುಡದೂರು, ಉಪಾಧ್ಯಕ್ಷೆ ಹುಲಿಗೆಮ್ಮ, ಕಾರ್ಯಕ್ರಮಾಧಿಕಾರಿ ಶಿವಪ್ಪ ಹಲಕಿ, ಉಪನ್ಯಾಸಕರಾದ ಮಹ್ಮದ್ ಆಸೀಫ್, ಹನುಮೇಶಗೌಡ, ಹನುಮಂತ, ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಇದ್ದರು.