ಕನಕಗಿರಿ: ಕೆ.ಕಾಟಾಪುರ ಗ್ರಾಮದ ಕೆರೆಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಯುವಕರು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆರೆ ತುಂಬಿಸುವ ಯೋಜನೆಯಡಿ ನೀರು ತುಂಬಿಸಲಾಗಿತ್ತು. ಮೀನುಗಾರರು ಕೆರೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದಾರೆ. ದನಗಾಹಿ, ಕುರಿಗಾಹಿಗಳಿಗೂ ಬಳಕೆಯಾಗುತ್ತಿದೆ. ಯುವಕರು, ಮಕ್ಕಳು ಕೆರೆಯಲ್ಲಿ ಈಜಾಡುತ್ತಾರೆ. ಆದರೆ, ಮೊಸಳೆ ಕಾಣಿಸಿಕೊಂಡಿರುವುದು ಭಯ ಮನೆ ಮಾಡಿದೆ. ಹೀಗಾಗಿ ಗ್ರಾಪಂನಿಂದ ಡಂಗುರ ಸಾರಲಾಗಿದೆ. ಕೆರೆಯಲ್ಲಿ ಮೊಸಳೆಯಿರುವ ಕಾರಣ ನೀರಿಗೆ ಇಳಿಯದಂತೆ, ಭಿತ್ತಿ ಪತ್ರಗಳನ್ನು ಹಚ್ಚಿ ಜಾಗೃತಿ ಮೂಡಿಸಲಾಗಿದೆ. ಅನಾಹುತಕ್ಕೂ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತು, ಮೊಸಳೆ ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.