ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಎಚ್.ಡಿ. ರೇವಣ್ಣಗೆ ಸುತ್ತಿಕೊಂಡಿರುವ ಕಾನೂನು ಕುಣಿಕೆ ದಿನೇದಿನೆ ಬಿಗಿಯಾಗುತ್ತಿದೆ. ಪ್ರಜ್ವಲ್ ವಿರುದ್ಧ ಅತ್ಯಾಚಾರ ಆರೋಪದಡಿ ಇನ್ನೊಂದು ಎಫ್ಐಆರ್ ದಾಖಲಾಗಿದ್ದರೆ, ಮಹಿಳೆಯನ್ನು ಅಪಹರಿಸಿದ ಆರೋಪದಡಿ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೇ ಪ್ರಕರಣದಲ್ಲಿ ರೇವಣ್ಣ ಪತ್ನಿ ಭವಾನಿಗೂ ವಿಚಾರಣೆಗೆ ಹಾಜರಾ ಗುವಂತೆ ನೋಟಿಸ್ ನೀಡಿರುವುದಾಗಿ ತಿಳಿದು ಬಂದಿದೆ. ಇದರೊಂದಿಗೆ ತಂದೆ-ಮಗನ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ 3ಕ್ಕೆ ಏರಿಕೆ ಆದಂತಾಗಿದೆ.
2ನೇ ನೋಟಿಸ್: ವಿದೇಶಕ್ಕೆ ತೆರಳಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪದ ಮೇಲೆ ಎಫ್ಐಆರ್ ದಾಖಲಾಗುತ್ತಿದ್ದಂತೆ ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು 2ನೇ ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಜತೆಗೆ ರೇವಣ್ಣಗೂ ನೋಟಿಸ್ ಕೊಟ್ಟಿದ್ದು, 24 ಗಂಟೆಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಲಾಗಿದೆ.
ಇದೆಲ್ಲದರ ಮಧ್ಯೆ ಹೊಳೆನರಸಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಸಂಬಂಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಹಿಂಪಡೆದರು. ಆದರೆ, ಕೆ.ಆರ್. ನಗರ ಠಾಣೆಯಲ್ಲಿ ದಾಖಲಾದ ಅಪಹರಣ ಪ್ರಕರಣದಲ್ಲಿ ಮತ್ತೆ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಎಸ್ಐಟಿ ಅಧಿಕಾರಿಗಳು, ರೇವಣ್ಣಗೂ ವಿದೇಶ ಪ್ರಯಾಣ ಬೆಳೆಸದಂತೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವುದರ ಮೂಲಕ ನಾಕಾಬಂದಿ ವಿಧಿಸಿದ್ದಾರೆ. ಮೊದಲ ನೋಟಿಸ್ ಅಡಿ ವಿಚಾರಣೆಗೆ ಗೈರು ಹಾಜರಾಗಿದ್ದ ರೇವಣ್ಣ ಇದೀಗ 2ನೇ ನೋಟಿಸ್ ಪರಿಗಣಿಸಿ ಎಸ್ಐಟಿ ಮುಂದೆ ಹಾಜರಾಗುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ವಿಚಾರಣೆಗೆ ಹಾಜರಾದ ವಕೀಲ: ನೋಟಿಸ್ ಹಿನ್ನಲೆಯಲ್ಲಿ ಶುಕ್ರವಾರ ವಕೀಲ ದೇವರಾಜೇಗೌಡ ಸಿಐಡಿಯ ಎಸ್ಐಟಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದರು. ಬಳಿಕ ಮಾತನಾಡಿದ ಅವರು, ಮುಂದಿನ 4-5 ದಿನಗಳಲ್ಲಿ ಮಹತ್ತರ ಸಂಗತಿಗಳು ಹೊರಬೀಳಲಿವೆ. ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಬಹಿರಂಗಗೊಂಡ ಬಳಿಕ ಎಲ್ಲ ಸಂತ್ರಸ್ತೆಯರ ಬದುಕು ನರಕವಾಗಿದೆ. ತಮ್ಮ ಊರುಗಳಲ್ಲಿ, ವಾಸ ಮಾಡುವ ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ತಲೆಯೆತ್ತಿ ತಿರುಗಾಡದ ಸ್ಥಿತಿ ನಿರ್ವಣವಾಗಿದೆ. ಸಂತ್ರಸ್ತೆಯರ ವಿಡಿಯೋ ವೈರಲ್ ಮಾಡಿದವರು ಸಹ ಅಪರಾಧಿಗಳೇ ಎಂದು ಕಿಡಿಕಾರಿದರು. ಮಾಡದೆ ವಿಡಿಯೋ ವೈರಲ್ ಮಾಡಿದವರು ಸಹ ಅಷ್ಟೇ ಅಪರಾಧಿಗಳೆಂದು ಕಿಡಿಕಾರಿದರು.
ಕಿಡ್ನ್ಯಾಪ್ ಕೇಸ್ ದಾಖಲು: ತನ್ನ ತಾಯಿ ಅಪಹರಣಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿ ಮೈಸೂರಿನ ಕೆ.ಆರ್. ನಗರ ಠಾಣೆಗೆ ಮಹಿಳೆಯ ಪುತ್ರ ದೂರು ದಾಖಲಿಸಿದ್ದಾರೆ. ಈ ಸಂಬಂಧ ರೇವಣ್ಣ , ಸತೀಶ್ ಬಾಬು ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನನ್ನ ತಾಯಿ, ರೇವಣ್ಣ ಮನೆ, ತೋಟದಲ್ಲಿ 6 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. 3 ವರ್ಷದ ಹಿಂದೆ ಕೆಲಸ ಬಿಟ್ಟು ನಮ್ಮೂರಿಗೆ ಬಂದಿದ್ದರು. ಇತ್ತೀಚೆಗೆ ಭವಾನಿ ರೇವಣ್ಣ ಕರೆಯುತ್ತಿದ್ದಾರೆ ಎಂದು ಹೇಳಿ ಹೆಬ್ಬಳುಕೊಪ್ಪಲಿನ ಸತೀಶ್ ಬಾಬಣ್ಣ ಎನ್ನುವವರು ನನ್ನ ತಾಯಿಯನ್ನು ಹೊಳೆನರಸೀಪುರಕ್ಕೆ ಕರೆದೊಯ್ದರು. ಚುನಾವಣೆ ನಡೆದ ದಿನ ಮತ್ತೆ ವಾಪಸ್ ಬಿಟ್ಟು ಹೋಗಿದ್ದರು. ಏ. 29ರ ರಾತ್ರಿ ಮತ್ತೆ ಬಂದು ರೇವಣ್ಣ ಸಾಹೇಬರು ಕರೆಯುತ್ತಿದ್ದಾರೆ ಎಂದು ನನ್ನ ತಾಯಿಯನ್ನು ಒತ್ತಾಯ ಮಾಡಿ ಕರೆದುಕೊಂಡು ಹೋದರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗನ್ ಹೆಸರಲ್ಲಿ ಬೆದರಿಸಿ ರೇಪ್! : ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪ್ರಜ್ವಲ್ ವಿರುದ್ಧ ಸಿಐಡಿ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹಾಸನದ 44 ವರ್ಷದ ಸಂತ್ರಸ್ತೆ ಹೇಳಿಕೆ ಆಧರಿಸಿ ಎಫ್ಐಆರ್ ಆಗಿದೆ. ಜೆಡಿಎಸ್ ಕಾರ್ಯಕರ್ತೆಯಾದ ನಾನು, ಜನರ ಕೆಲಸ ಮಾಡಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಶಾಸಕ ಮತ್ತು ಸಂಸದರ ಬಳಿ ಆಗಾಗ ಹೋಗಿ ಬರುತ್ತಿದ್ದೆ. ಕೆಲ ತಿಂಗಳ ಹಿಂದೆ ಪ್ರಜ್ವಲ್ ರೇವಣ್ಣ ಅವರ ಕಚೇರಿ ಹಾಗೂ ಕ್ವಾರ್ಟರ್ಸ್ಗೆ ಹೋಗಿದ್ದೆ. ಅಲ್ಲಿಂದ ಪ್ರಜ್ವಲ್ ಕಡೆಯವರು ನನ್ನನ್ನು ಮೊದಲ ಮಹಡಿಗೆ ಕಳುಹಿಸಿದ್ದರು. ಅಲ್ಲಿಗೆ ಬಂದ ಪ್ರಜ್ವಲ್, ಇತರೆ ಮಹಿಳೆಯರನ್ನು ಮಾತನಾಡಿಸಿ ಕಳುಹಿಸಿದ್ದರು. ಕೊನೆಯಲ್ಲಿ ನಾನು ಒಬ್ಬಳೇ ಉಳಿದುಕೊಂಡಿದ್ದೆ. ಎಲ್ಲರೂ ಹೋದ ನಂತರ, ನನ್ನ ಕೈ ಹಿಡಿದಿದ್ದ ಪ್ರಜ್ವಲ್, ಕೊಠಡಿಯೊಂದಕ್ಕೆ ಎಳೆದೊಯ್ದಿದ್ದರು. ಕೊಠಡಿ ಬಾಗಿಲು ಹಾಕಿಕೊಂಡು ಒಳಗಿನಿಂದ ಲಾಕ್ ಮಾಡಿದರು. ನಿನ್ನ ಪತಿಯಿಂದ ನನ್ನ ತಾಯಿಗೆ ಎಂಎಲ್ಎ ಟಿಕೆಟ್ ತಪ್ಪಿತು ಎಂದು ಪ್ರಜ್ವಲ್ ಹೇಳಿದ್ದರು. ನಂತರ, ನನಗೆ ಬಟ್ಟೆ ಬಿಚ್ಚಿ ಮಂಚದ ಮೇಲೆ ಮಲಗುವಂತೆ ಒತ್ತಾಯಪಡಿಸಿದರು. ಒಪ್ಪದಿದ್ದಾಗ ನನ್ನ ಬಳಿ ಗನ್ ಇದೆ. ನಾನು ಹೇಳಿದಂತೆ ಕೇಳದಿದ್ದರೆ, ನಿನ್ನನ್ನು ಮತ್ತು ನಿನ್ನ ಪತಿಯನ್ನು ಮುಗಿಸುತ್ತೇನೆ ಎಂದು ಪ್ರಜ್ವಲ್ ಬೆದರಿಸಿದ್ದರು. ನಂತರ ಭಯದಲ್ಲಿ ಅವರು ಹೇಳಿದಂತೆ ಮಾಡಿದೆ. ಅದನ್ನು ಪ್ರಜ್ವಲ್ ರೇವಣ್ಣ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿಕೊಂಡು ಬ್ಲಾ್ಯಕ್ವೆುೕಲ್ ಮಾಡಿ ಪದೇಪದೆ ನನ್ನ ಕರೆಸಿಕೊಂಡು ಅತ್ಯಾಚಾರ ಎಸಗಿದರು ಎಂದು ದೂರಿನಲ್ಲಿ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಯಾವೆಲ್ಲ ಕೇಸ್?
. ಪ್ರಜ್ವಲ್ ವಿರುದ್ಧ ಜಿಪಂ ಮಾಜಿ ಸದಸ್ಯೆಯಿಂದ ರೇಪ್ ದೂರು
. ಐಪಿಸಿ ಸೆಕ್ಷನ್ 376(2) ಅಡಿ ಪ್ರಕರಣ ದಾಖಲು
. ಮಹಿಳೆ ಬೆದರಿಸಿ ನಿರಂತರ ಅತ್ಯಾಚಾರ ದೂರು
. 506 ಅಪರಾಧಿಕ ಉದ್ದೇಶದಿಂದ ಬೆದರಿಸುವುದು
. 354ಎ1 ಲೈಂಗಿಕ ಬೇಡಿಕೆಗೆ ಒತ್ತಾಯಿಸುವುದು
. 354ಬಿ ಅಪರಾಧಿಕ ಉದ್ದೇಶಕ್ಕೆ ಮಹಿಳೆ ಮೇಲೆ ಹಲ್ಲೆ
. 354ಸಿ ಮಹಿಳೆ ಇಚ್ಛೆ ವಿರುದ್ಧ ಖಾಸಗಿ ವಿಷಯ ಸೆರೆ ಹಿಡಿಯುವುದು
ಹುಬ್ಬಳ್ಳಿ: ಹಿಂದು ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಕೊಲೆ ಬೆದರಿಕೆ, ಆರೋಪಿ ವಶಕ್ಕೆ!