ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಪಂ ವ್ಯಾಪ್ತಿಯ ಅಡವಿದೊಡ್ಡ ತಾಂಡಾದಲ್ಲಿ ಬೇಸಿಗೆ ಆರಂಭಕ್ಕೂ ಮುಂಚೆಯೇ ನೀರಿನ ಅಭಾವವಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ತಾಂಡಾದಲ್ಲಿ ಮಂಗಳವಾರ ಗ್ರಾಪಂನಿಂದ ಬೋರ್ವೆಲ್ ಕೊರೆಸಲಾಯಿತು.
ಈ ಹಿಂದೆ ಕೊರೆಸಲಾದ ಬೋರ್ವೆಲ್ ಅಂತರ್ಜಲ ಕುಸಿದು ನಿವಾಸಿಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಅಲ್ಲದೆ ಈ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ದೂರಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ತಹಸೀಲ್ದಾರ್ ವಿಶ್ವನಾಥ ಮುರುಡಿ ಹಾಗೂ ತಾಪಂ ಇಒ ಚಂದ್ರಶೇಖರ ಕಂದಕೂರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ವರ್ಷವೂ ನೀರಿನ ಅಭಾವವಾದಾಗ ತಾಂಡಾಕ್ಕೆ ಹೊಂದಿಕೊಂಡಿದ್ದ ರೈತರೊಬ್ಬರ ಬೋರ್ವೆಲ್ ನೀರು ಪಡೆಯಲಾಗಿತ್ತು. ಅಲ್ಲದೇ ಗ್ರಾಮೀಣ ಕುಡಿವ ನೀರು ಯೋಜನೆಯಿಂದ ಎರಡು ಬೋರ್ವೆಲ್ ಕೊರೆಯಿಸಲಾಗಿತ್ತು. ಪ್ರಸಕ್ತ ವರ್ಷದ ಮುಂಗಾರು ಹಾಗೂ ಹಿಂಗಾರು ಕೈಕೊಟ್ಟು ಬರಗಾಲ ಬಿದ್ದಿದೆ. ಈ ಬೋರ್ವೆಲ್ಗಳು ಸಹ ಬತ್ತಿವೆ. ಹೀಗಾಗಿ ಜನರಿಗೆ ನೀರಿನ ಅನುಕೂಲಕ್ಕಾಗಿ ಕೊಳವೆಬಾವಿ ಕೊರೆಸಲಾಗುತ್ತಿದೆ.
ಗ್ರಾಪಂ ಅಧ್ಯಕ್ಷ ವೆಂಕಟೇಶ ತೊಗರಿ, ಪಿಡಿಒ ಅಮರೇಶ, ಉಪಾಧ್ಯಕ್ಷೆ ಸರಸ್ವತಿ ರಾಠೋಡ್, ಮಾಜಿ ಅಧ್ಯಕ್ಷೆ ಸಾವಿತ್ರಿ ಲಕ್ಷ್ಮಣ ರಾಠೋಡ್ ಇತರರಿದ್ದರು.