ಗ್ರಾಮೀಣರಿಗೆ ಚಿಕ್ಕಡಂಕನಕಲ್ ಗ್ರಾಪಂ ಅಧ್ಯಕ್ಷ ವಿರೂಪಾಕ್ಷಪ್ಪ ಸಲಹೆ
ಕನಕಗಿರಿ: ಗ್ರಾಮೀಣರು ಆರೋಗ್ಯ ಮತ್ತು ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಚಿಕ್ಕಡಂಕನಕಲ್ ಗ್ರಾಪಂ ಅಧ್ಯಕ್ಷ ವಿರೂಪಾಕ್ಷಪ್ಪ ಹೇಳಿದರು.
ತಾಲೂಕಿನ ಚಿರ್ಚನಗುಡ್ಡ ತಾಂಡಾದಲ್ಲಿ ಶ್ರೀ ಗುಡ್ಡದ ಆಂಜನೇಯ ಕಾರ್ತಿಕೋತ್ಸವ ನಿಮಿತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ತಡೆಗಟ್ಟುವಿಕೆ ಘಟಕ ಕೊಪ್ಪಳ, ಸಮುದಾಯ ಆರೋಗ್ಯ ಕೇಂದ್ರ ಕನಕಗಿರಿ, ಪ್ರಾಥಮಿಕ ಆರೋಗ್ಯ ಕೇಂದ್ರ ನವಲಿ ಹಾಗೂ ಕೊಪ್ಪಳ ಕೆಎಚ್ಪಿಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮುದಾಯ ಆಧಾರಿತ ಆರೋಗ್ಯ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಪ್ರಸಕ್ತ ದಿನಮಾನಗಳಲ್ಲಿ ಆಹಾರ ಪದ್ಧತಿಯಿಂದಾಗಿ ಹಲವು ಬಗೆಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಜನತೆ ಚಿಕಿತ್ಸೆ ಪಡೆಯುವಲ್ಲಿ ನಿರ್ಲಕ್ಷೃ ವಹಿಸುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯು ಹಳ್ಳಿ ಹಳ್ಳಿಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿದ್ದು, ಗ್ರಾಮೀಣರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಸಿದ್ದರಾಮಪ್ಪ ಮಾತನಾಡಿ, ಸಮುದಾಯ ಆಧಾರಿತ ಕಾರ್ಯಕ್ರಮಗಳ ಉಪಯೋಗ, ಏಡ್ಸ್ ಕಾಯಿಲೆಯ ಲಕ್ಷಣ, ಮುಂಜಾಗ್ರತೆ ಮತ್ತು ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಶಿಬಿರದಲ್ಲಿ 120ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಆರೋಗ್ಯ ಮಿತ್ರ ನಾಗರಾಜ್ ಕಾಜಿ, ನೇತ್ರಾಧಿಕಾರಿ ಮುರ್ತುಜಾ ಸಾಬ್, ಕೆಎಚ್ಪಿಟಿ ತಾಲೂಕು ಸಂಯೋಜಕ ಜಾಧವ್, ಗ್ರಾಪಂ ಉಪಾಧ್ಯಕ್ಷ ಬಸವರಾಜ್, ಸದಸ್ಯರಾದ ಮಾರಮ್ಮ, ಮಾರುತಿ ರಾಮಚಂದ್ರಗೌಡ ಇದ್ದರು.