ಕಂಪ್ಲಿ: ನೂತನ ವಿಜಯನಗರ ಜಿಲ್ಲೆಗೆ ಕಂಪ್ಲಿಯನ್ನು ಸೇರ್ಪಡಿಸುವಂತೆ ಹೈಕೋರ್ಟ್ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಜು.29ಕ್ಕೆ ಬರಲಿದೆ ಎಂದು ಪಿಐಎಲ್ ಸಲ್ಲಿಸಿದ್ದ ವಕೀಲ ಮೋಹನ್ ಕುಮಾರ್ ದಾನಪ್ಪ ತಿಳಿಸಿದ್ದಾರೆ.
ಕಂಪ್ಲಿ ವಿಜಯನಗರ ಜಿಲ್ಲೆಗೆ ಸೇರ್ಪಡಿಸುವಂತೆ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ಅಭಯ್ ಎಸ್.ಓಕಾ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಜೂ.28ರಂದು ವಿಚಾರಣೆಗೆ ಬಂದಿದ್ದು, ಕಳೆದ ವಿಚಾರಣೆಯ ಆದೇಶದಂತೆ ಆಕ್ಷೇಪಣೆ ಸಲ್ಲಿಸಲಾಗಿದೆಯೇ ಎಂದು ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿದೆ. ರಾಜ್ಯ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಲು ಮತ್ತೊಮ್ಮೆ ಕಾಲಾವಕಾಶ ಕೋರಿದರು. ಇದರಿಂದಾಗಿ ಜು.29ಕ್ಕೆ ವಿಚಾರಣೆ ಮುಂದೂಡಲಾಯಿತು.
ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸದ ಹಿನ್ನೆಲೆಯಲ್ಲಿ 2021ರ ಮಾರ್ಚ್ 10ರಂದು ಭಾರತೀಯ ದಲಿತ ಪ್ಯಾಂಥರ್, ಕಂಪ್ಲಿ ತಾಲೂಕು ವಕೀಲರ ಬಳಗ ಹಾಗೂ ಕಂಪ್ಲಿ ತಾಲೂಕು ವಿಜಯನಗರ ಜಿಲ್ಲೆಗೆ ಸೇರ್ಪಡೆ ಹೋರಾಟ ಸಮಿತಿ ಸದಸ್ಯರು ಹೈಕೋರ್ಟ್ಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದರು.