ಕಂಪ್ಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಸಾರ್ವಜನಿಕರಿಂದ ಚಂದಾ ಎತ್ತಿ ಹಳೆಯ ಬಸ್ ನಿಲ್ದಾಣದಲ್ಲಿ ಶೆಲ್ಟರ್ ನಿರ್ಮಿಸಲು ಪುರಸಭಾಡಳಿತ ಸ್ಥಳ ಮತ್ತು ಪರವಾನಗಿ ನೀಡಬೇಕು ಎಂದು ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ ಬೋವಿ ಒತ್ತಾಯಿಸಿದರು.
ಹಳೆಯ ಬಸ್ ನಿಲ್ದಾಣದಲ್ಲಿ ಕುರುಗೋಡು, ಹೊಸಪೇಟೆ, ಗಂಗಾವತಿಗೆ ತೆರಳುವ ಪ್ರಯಾಣಿಕರಿಗೆ ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರು ಬಿಸಿಲಿನಲ್ಲಿ ರಸ್ತೆ ಮೇಲೆಯೇ ನಿಲ್ಲಬೇಕಿದೆ. ಈ ಬಸ್ನಿಲ್ದಾಣದಲ್ಲಿ ಶೆಲ್ಟರ್ ನಿರ್ಮಿಸುವಂತೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದಾಗ್ಯೂ ಪುರಸಭಾಡಳಿತದಿಂದ ಸೂಕ್ತ ಸ್ಪಂದನೆಯಿಲ್ಲದಾಗಿದೆ. ಪರವಾನಗಿ ನೀಡಿ ಸ್ಥಳ ಒದಗಿಸಿದಲ್ಲಿ ಸಾರ್ವಜನಿಕರಿಂದ ಚಂದಾ ಎತ್ತಿ ನಾವೇ ಶೆಲ್ಟರ್ ನಿರ್ಮಿಸುತ್ತೇವೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪಗೆ ಬುಧವಾರ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಡಿ.ಎಚ್.ಎಂ.ರವೀಂದ್ರ, ಕೆ.ರಾಘವೇಂದ್ರ, ವಸ್ತ್ರದ ಜಡೆಯ್ಯಸ್ವಾಮಿ, ಅಮರೇಶ್ ಸೇರಿ ಇತರರಿದ್ದರು.