ಕಂಪ್ಲಿ: ಮಸಣ ಕಾರ್ಮಿಕ ಕುಟುಂಬ ಸದಸ್ಯರ ಗಣತಿ ಮಾಡಿ, ಪುನರ್ವಸತಿಗೆ ಕ್ರಮವಹಿಸಬೇಕು ಎಂದು ರಾಜ್ಯ ಮಸಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ.ನಿಂಗಪ್ಪ ಆಗ್ರಹಿಸಿದರು. ತಾಪಂ ಇಒ ಕೆ.ಎಸ್.ಮಲ್ಲನಗೌಡಗೆ ಬುಧವಾರ ಮನವಿ ಸಲ್ಲಿಸಿ, ಮಸಣ ಕಾರ್ಮಿಕರ ಜೀವನ ಸಂಕಷ್ಟದಿಂದ ಕೂಡಿದೆ. ಮಸಣಕ್ಕೊಬ್ಬರಂತೆ ನಿರ್ವಾಹಕರೆಂದು ನೇಮಿಸಿಕೊಳ್ಳುವ ಮೂಲಕ ಉದ್ಯೋಗ ಭದ್ರತೆ, ವೇತನ ನೀಡಬೇಕಿದೆ. ಮಸಣದಲ್ಲಿ ತೆಗೆವ ಕುಣಿಗಳನ್ನು ನರೇಗಾ ಉದ್ಯೋಗವಾಗಿ ಪರಿವರ್ತಿಸಬೇಕು. ಸುರಕ್ಷತಾ ಪರಿಕರಗಳನ್ನು ಒದಗಿಸಬೇಕು. ಮಾಸಿಕ ಪಿಂಚಣಿ, ಭವಿಷ್ಯನಿಧಿ, ತಲಾ ಕುಟುಂಬಕ್ಕೆ ಐದು ಎಕರೆ ಭೂಮಿ, ಮನೆ ಸೌಲಭ್ಯ, ನಿರುದ್ಯೋಗಭತ್ಯೆ, ಮಾಸಿಕ 10 ಕೆಜಿ ಸಮಗ್ರ ಆಹಾರ ಸಾಮಗ್ರಿ ಕಿಟ್, ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಶೇ.75 ಸಹಾಯಧನದ ಸಾಲ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಸಿ.ರಮೇಶ್, ಎಂ.ಸಿ.ಮಾಯಪ್ಪ, ಬೆಳ್ಳಕ್ಕಿ ಹುಸೇನಪ್ಪ, ಸಣಾಪುರ ದುರುಗಪ್ಪ, ಸಿ.ಕನಕ, ಸಿ.ಶಿವಪ್ಪ, ಆದಿಮನೆ ರಾಜ, ಕುರ್ಚಿಗಿಡಿ ಮಂಜುನಾಥ ಇತರರಿದ್ದರು.