ಕಂಪ್ಲಿ: ಏಳು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡ ಇಲ್ಲಿನ ಐತಿಹಾಸಿಕ ಸೋಮಪ್ಪ ಕೆರೆಗೆ ಕಿಡಿಗೇಡಿಗಳ ಕಾಟ ಹೆಚ್ಚಿದೆ. ಮಕ್ಕಳ ಆಟಿಕೆ, ಜೋಕಾಲಿ ಸೇರಿ ಇತರ ಆಸ್ತಿಪಾಸ್ತಿಗಳನ್ನು ಜಖಂಗೊಳಿಸುವ ಮೂಲಕ ಕೆರೆಯ ಪರಿಸರ ಹದಗೆಡಿಸುತ್ತಿದ್ದು, ಕಡಿವಾಣ ಬೀಳುತ್ತಿಲ್ಲ.
ಇದನ್ನೂ ಓದಿ: ಶಿರಸಿಗೆ ಬಂದ ಗೋಲ್ಡನ್ ಸ್ಟಾರ್ ಗಣೇಶ, ಪುನರುಜ್ಜೀವನಗೊಂಡ ಕೆರೆ ಲೋಕಾರ್ಪಣೆ
7.06 ಕೋಟಿ ರೂ. ವೆಚ್ಚದಲ್ಲಿ ನವೀಕರಣ
ಸೋಮಪ್ಪ ಕೆರೆ ಎಂಟು ಶತಮಾನಗಳ ಇತಿಹಾಸ ಹೊಂದಿದೆ. 2019ರ ಮೇ 29ರಂದು 7.06 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. 2022ರ ಏ.16ರಂದು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದರು.
ಒಟ್ಟು 39 ಎಕರೆ ವಿಸ್ತೀರ್ಣದಲ್ಲಿ 31 ಎಕರೆ ವಾಟರ್ಬಾಡಿ, 4.30 ಎಕರೆ ಉದ್ಯಾನಕ್ಕೆ ಮೀಸಲಿದೆ. 1482 ಮೀಟರ್ ಬಂಡ್ ನಿರ್ಮಿಸಲಾಗಿದೆ. ಕೆರೆಗೆ ಚರಂಡಿ ನೀರು ಸೇರದಂತೆ 3 ಶೀಲ್ಟ್ ಟ್ರಾಪ್, ಹೈಲ್ಯಾಂಡ್, ಫೀಡರ್ ಕೆನಾಲ್, ಕೆರೆಕೋಡಿ, ಬಂಡ್, ರಿಂಗ್ಬಂಡ್, 1.350ಕಿ.ಮೀ ಉದ್ದದ ವಾಯುವಿಹಾರ ರಸ್ತೆ ನಿರ್ಮಿಸಿದ್ದು, ವಿದ್ಯುತ್ದೀಪ, ಹೈಮಾಸ್ಟ್ ದೀಪಗಳನ್ನು ಅಳವಡಿಸಿದೆ.
ಮೂವಿಂಗ್ ಲೈಬ್ರರಿ
ನಗರೋತ್ಥಾನದ ಉಳಿತಾಯ ಅನುದಾನದ 1.30 ಕೋಟಿ ರೂ. ವೆಚ್ಚದಲ್ಲಿ ಕೆರೆ ಸುತ್ತ ತಂತಿಬೇಲಿ ಅಳವಡಿಕೆ, ಶೌಚಗೃಹ ನಿರ್ಮಾಣ, 100 ಗಿಡಗಳನ್ನು ಬೆಳೆಸುವ, ಟರ್ಫಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ವಾಹನದಲ್ಲಿ ಪುಸ್ತಕಗಳನ್ನು ಜೋಡಿಸುವ ಮೂಲಕ ಮೂವಿಂಗ್ ಲೈಬ್ರರಿ ಕಲ್ಪಿಸಲಾಗಿದೆ.
ಜೋಕಾಲಿ ಸೇರಿ ಇತರ ಆಟಿಕೆಗಳನ್ನು ಅವಳವಡಿಸಲಾಗಿದೆ. ವಾಯು ವಿಹಾರಕ್ಕೆ ವಾಕಿಂಗ್ ಟ್ರಾೃಕ್ ನಿರ್ಮಿಸಲಾಗಿದೆ. ಆದರೆ, ಕೆಲ ಕಿಡಿಗೇಡಿಗಳು ಎಲ್ಲವೂ ಹಾಳು ಮಾಡುತ್ತಿದ್ದಾರೆ. ಜೋಕಾಲಿಗಳನ್ನು ಮುರಿದಿದ್ದಾರೆ. ಕಾಂಕ್ರಿಟ್ ಹಾಕಿ ಇಟ್ಟಿದ್ದ ಕೆಲ ಡಸ್ಟ್ಬಿನ್ಗಳನ್ನು ಕಿತ್ತು ಹಾಕಿದ್ದಾರೆ. ಸಂಚಾರಿ ಲೈಬ್ರರಿ ಬಸ್ನ ಗಾಜುಗಳನ್ನು ಒಡೆದು ಹಾಕಿದ್ದಾರೆ. ಕೆರೆಯಲ್ಲಿ ಅಳವಡಿಸಿರುವ ಕಾರಂಜಿ ಯಂತ್ರವನ್ನು ಜಖಂಗೊಳಿಸಿದ್ದಾರೆ.
ಮಲಮೂತ್ರ ಮಾಡಿ ಪರಿಸರ ಹದಗೆಡಿಸುತ್ತಿದ್ದಾರೆ. ಸಂಜೆ ನಂತರ ಕುಡುಕುರ ಹಾವಳಿ ಹೆಚ್ಚುತ್ತಿದ್ದು ಎಲ್ಲೆಂದರಲ್ಲೆ ಬಾಟಲಿ, ಪ್ಲಾಸ್ಟಿಕ್ ಕವರ್ಗಳು ಬಿದ್ದಿವೆ. ಇದು ವಾಯು ವಿಹಾರಕ್ಕೆ ಬರುವ ಜನರು ಹಾಗೂ ಮಕ್ಕಳಿಗೆ ಕಿರಿಕಿರಿ ಉಂಟು ಮಾಡಿವೆ.
ಸೋಮಪ್ಪ ಕೆರೆ ಪರಿಸರದಲ್ಲಿನ ಬಹುತೇಕ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ಕಂಬದ ತಂತಿಗಳಿಗೆ ರಕ್ಷಣೆಯಿಲ್ಲದಾಗಿದೆ. ಕೆರೆಯ ನೀರು ವಾಸನೆ ಬರುತ್ತಿದ್ದು, ಬದಲಿಸಬೇಕು. ಟ್ರಾೃಕಿಂಗ್ನಲ್ಲಿ ಸ್ವಚ್ಛತೆ ಕಾಪಾಡಬೇಕು. ಕೆರೆ ಅಭಿವೃದ್ಧಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಗಿಡಗಳನ್ನು ನೆಟ್ಟು ಹಸಿರೀಕರಣಗೊಳಿಸಬೇಕು. ಕೆರೆ ಆವರಣವನ್ನು ಹಾಳುಗೆಡುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ದಿನದ 24 ತಾಸು ಕಾವಲುಗಾರರನ್ನು ನೇಮಿಸಬೇಕು.
| ಡಾ.ಎ.ಸಿ.ದಾನಪ್ಪ, ರಾಜ್ಯ ಪ್ರ.ಕಾರ್ಯದರ್ಶಿ, ದಲಿತ ಪ್ಯಾಂಥರ್, ಕಂಪ್ಲಿಕಲ್ಯಾಣ ಕರ್ನಾಟಕದಲ್ಲಿಯೇ ಸೋಮಪ್ಪ ಕೆರೆ ದೊಡ್ಡದಾಗಿದೆ. ಕೆರೆಯ ಸುತ್ತ ತಂತಿಬೇಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, 15ನೇಹಣಕಾಸು ಯೋಜನೆಯ 74ಲಕ್ಷ ರೂ. ಪೂರ್ಣಗೊಳಿಸಲಾಗುವುದು. ಡಿಎಂಎಫ್ ಅನುದಾನದಡಿ ಉದ್ಯಾನ ನಿರ್ಮಾಣ, ಕೆರೆ ಪರಿಸರದಲ್ಲಿ ಗಿಡ ನೆಟ್ಟು ಹಸಿರೀಕರಣಗೊಳಿಸುವುದು ಸೇರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಕೆರೆಯಲ್ಲಿನ 52 ವಿದ್ಯುತ್ ಕಂಬಗಳ ಕೇಬಲ್ ಬದಲಿಸಿ ಎಲ್ಲ ವಿದ್ಯುತ್ ದೀಪ ಬೆಳಗಿಸಲಾಗುವುದು. ಕೆರೆ ನೀರನ್ನು ತುಂಗಭದ್ರಾ ನದಿಯಿಂದ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಕೆರೆ ಸಂರಕ್ಷಣೆಗಾಗಿ ಇಬ್ಬರು ಗೃಹರಕ್ಷಕ ಸಿಬ್ಬಂದಿ ನೇಮಕ ಮಾಡಲಾಗುವುದು. ಕೆರೆ ಪರಿಸರ ಹಾಳುಮಾಡುತ್ತಿದ್ದ ಒಬ್ಬ ಕಿಡಿಗೇಡಿ ವಿರುದ್ಧ ಕೇಸ್ ದಾಖಲಿಸಲಾಗಿದೆ.
| ಡಾ.ಎನ್.ಶಿವಲಿಂಗಪ್ಪ, ಪುರಸಭೆ ಮುಖ್ಯಾಧಿಕಾರಿ, ಕಂಪ್ಲಿ