ಕಂಪ್ಲಿ: ರೈತರು ಬೆಳೆಗಳನ್ನು ಅಪರಿಚಿತ ದಲ್ಲಾಳಿಗಳಿಗೆ ಮಾರಾಟ ಮಾಡುವ ಬದಲಿಗೆ ತೀರಾ ಪರಿಚಿತ ವ್ಯಾಪಾರಿಗಳಿಗೆ ಮಾರಬೇಕು ಎಂದು ಪಿಎಸ್ಐ ವಿರೂಪಾಕ್ಷಪ್ಪ ಹೇಳಿದರು.
ಸಮೀಪದ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಶಾಂತಿಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಇತ್ತೀಚೆಗೆ ರೈತರಿಂದ ಧಾನ್ಯಗಳನ್ನು ಖರೀದಿಸುವ ದಲ್ಲಾಳಿಗಳು ತಲೆಮರೆಸಿಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಇದರಿಂದ ಕೃಷಿಕರು ಪರದಾಡುವಂತಾಗಿದೆ. ಆದ್ದರಿಂದ ಎಚ್ಚರಿಕೆವಹಿಸಬೇಕು.
ಗ್ರಾಮದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಸಾಮರಸ್ಯದಿಂದ ಜೀವನ ನಡೆಸುವ ಮೂಲಕ ಶಾಂತಿ ಕಾಪಾಡಬೇಕು. ವಾಹನ ಸವಾರರು ಅಗತ್ಯ ದಾಖಲೆ ಹೊಂದಿರಬೇಕು. ವಾಹನ ಚಾಲನಾ ಪರವಾನಗಿ, ವಿಮೆ ಪಡೆದುಕೊಳ್ಳಲು ಶೀಘ್ರ ಅಭಿಯಾನ ಹಮ್ಮಿಕೊಳ್ಳಲಾಗುವುದು. ಮಕ್ಕಳ ಶಿಕ್ಷಣಕ್ಕೆ ಪಾಲಕರು ಒತ್ತು ನೀಡುವಂತೆ ತಿಳಿಸಿದರು.
ಪ್ರಮುಖರಾದ ರೇವಣಸಿದ್ದಪ್ಪ, ಬಿ.ನಾರಾಯಣಪ್ಪ, ಸೀಕ್ಲಿ ಸೋಮಶೇಖರ್, ಕರೆಂಟ್ ಗೋಪಾಲಪ್ಪ, ಸಿ.ವಿರೂಪಾಕ್ಷಿ, ಗುರುರಾಜ, ಬಿ.ಎಂ.ಬಸವರಾಜಸ್ವಾಮಿ, ಕೆ.ಹನುಮಂತ, ಆರ್.ಎಂ.ರಾಮಯ್ಯ ಇತರರಿದ್ದರು.