ಕಂಪ್ಲಿ: ಕಂಪ್ಲಿಯಲ್ಲಿ ಸುಂದರಿ ಸಕ್ಕರೆ ಕಾರ್ಖಾನೆ ಶೀಘ್ರ ಆರಂಭಿಸಲಿದ್ದು, ರೈತರು ಕಬ್ಬು ಬೆಳೆದು ಪೂರೈಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಕೋರಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದ ಜಡೆಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಪ್ರಾ.ಕೃ.ಪ.ಸ.ಸಂಘದ ನೂತನ ಗೋದಾಮು, ಮಾರಾಟ ಮಳಿಗೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೋದಾಮು ಕಟ್ಟಡ ಉದ್ಘಾಟಿಸಿದ ಶಾಸಕ ಜೆ.ಎನ್.ಗಣೇಶ್, ಗೊಬ್ಬರ, ಬೀಜ, ಡಿಸೇಲ್ ಸೇರಿ ಕೃಷಿ ನಿರ್ವಹಣಾ ವೆಚ್ಚ ಏರಿಕೆಯಾದಂತೆ ರೈತರ ಬೆಳೆಗೆ ದರ ಇಲ್ಲದೆ ರೈತರು ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ. ರೈತರನ್ನು ದುಸ್ಥಿತಿಯಿಂದ ಕಾಪಾಡಲು ರೈತರ ಎಲ್ಲ ಬೆಳೆಗೂ ಬೆಂಬಲ ಬೆಲೆ ಘೋಷಿಸಬೇಕು, ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ವೇದಿಕೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರಕ್ಕೆ ಸಲಹೆ ನೀಡಿದರು.
ಸಾನ್ನಿಧ್ಯವಹಿಸಿದ್ದ ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು, ರೈತರು ಕುರಿಗಾಗಿ ಪಡೆದ ಸಾಲವನ್ನು ಐಪಿಎಲ್ ಜೂಜಿಗಿಡಬಾರದು. ಆಪತ್ತಿನಲ್ಲಿರುವ ರೈತರಿಗೆ ವಿಶ್ವಾಸ ತುಂಬುವುದು ಪತ್ತಿನ ಸಹಕಾರ ಸಂಘದ ಕರ್ತವ್ಯ ಎಂದರು. ಎಮ್ಮಿಗನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೇರ್ಗಿ ಮಹೇಶಗೌಡ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಪಿ.ಇಮಾಂಸಾಬ್, ಮುಖ್ಯಕಾರ್ಯನಿರ್ವಾಹಕ ಇ.ಜಡೇಶರೆಡ್ಡಿ, ಮಾಜಿ ಶಾಸಕ ಟಿ.ಎಚ್.ಸುರೇಶ್ಬಾಬು, ಮಾಜಿ ಸಂಸದೆ ಜೆ.ಶಾಂತಾ, ಗ್ರಾಪಂ ಅಧ್ಯಕ್ಷೆ ದಾಸರ ಅಂಜಿನಮ್ಮ ನಾರಾಯಣಪ್ಪ ಇತರರಿದ್ದರು.