ಕಂಪ್ಲಿ: ಶೀಘ್ರವೇ ಜೋಳ ಖರೀದಿ ಕೇಂದ್ರ ಆರಂಭಿಸುವಂತೆ ತಾಲೂಕಿನ ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ 8000 ಎಕರೆಯಷ್ಟು ಜೋಳ ಬೆಳೆದಿದ್ದು, ಎಮ್ಮಿಗನೂರು ಭಾಗದಲ್ಲಿಯೇ 3000ಕ್ಕೂ ಅಧಿಕ ಎಕರೆ ಜೋಳ ಕೊಯ್ಲಗಿದೆ. ಫಸಲು ಮಾರಲು ಖರೀದಿ ಕೇಂದ್ರವಿಲ್ಲದೆ ರೈತರು ಪರದಾಡುವಂತಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಶೀಘ್ರವೇ ಜೋಳ ಖರೀದಿ ಕೇಂದ್ರ ತೆರೆದು ಬೆಳೆಗಾರರ ಹಿತ ಕಾಯುವಂತೆ ಎಮ್ಮಿಗನೂರಿನ ಬಿ. ಸದಾಶಿವಪ್ಪ, ಬಿ.ಮಹೇಶಗೌಡ, ಸೂಗಪ್ಪ ಮತ್ತಿತರ ರೈತರು ಒತ್ತಾಯಿಸಿದ್ದಾರೆ.
ಗರಿಷ್ಠ 20 ಕ್ವಿಂಟಾಲ್ ಖರೀದಿಗೆ ನಿರ್ಧಾರ: ಹೈಬ್ರಿಡ್ ಬಿಳಿ ಜೋಳ ಕ್ವಿಂಟಾಲ್ಗೆ 2738 ರೂ., ಮಾಲ್ದಂಡಿ ಬಿಳಿ ಜೋಳ 2758 ರೂ., ರಾಗಿಗೆ 3377ರೂ. ಬೆಂಬಲ ಬೆಲೆ ನಿಗಧಿಗೊಂಡಿದೆ. ಕರ್ನಾಟಕ ಆಹಾರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಬೆಂಬಲ ಬೆಲೆಯಡಿ ಫಸಲು ಕೊಳ್ಳಲು 2021ರ ಡಿ.27ರಂದು ಅಧಿಕೃತ ಜ್ಞಾಪನ ಹೊರಡಿಸಿದ್ದರೂ ಖರೀದಿ ಕೇಂದ್ರ ಆರಂಭಗೊಂಡಿಲ್ಲ. ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಠ 20 ಕ್ವಿಂಟಾಲ್ ಜೋಳ ಖರೀದಿಗೆ ಇಲಾಖೆ ನಿರ್ಧರಿಸಿದೆ.
ಜ.24 ರಿಂದ ಜೋಳ ಮಾರಲು ರೈತರು ಹೆಸರು ನೋಂದಾಯಿಸಿಕೊಳ್ಳಬೇಕು. ಫೆ.1 ರಿಂದ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದೆ.
| ಗೌಸಿಯಾಬೇಗಂ, ತಹಸೀಲ್ದಾರ್, ಕಂಪ್ಲಿ