ಕಂಪ್ಲಿ: ಕರ್ನಾಟಕ ನೇಕಾರ ಅಭಿವೃದ್ಧಿ ನಿಗಮ ಕಾಟಾಚಾರಕ್ಕೆ ಸ್ಥಾಪನೆಗೊಳ್ಳದೆ ಸಮಸ್ತ ನೇಕಾರರ ಪ್ರಗತಿಗೆ ದಿಕ್ಸೂಚಿಯಾಗಬೇಕು ಎಂದು ನೇಕಾರ ಸಮುದಾಯಗಳ ಸಂಘದ ತಾಲೂಕು ಅಧ್ಯಕ್ಷ ಪಿ.ಬ್ರಹ್ಮಯ್ಯ ಒತ್ತಾಯಿಸಿದರು.
ಇಲ್ಲಿನ ಸತ್ಯನಾರಾಯಣಪೇಟೆಯ ತೊಗಟವೀರ ಕ್ಷತ್ರಿಯ ನೇಕಾರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೇಕಾರ ಸಮುದಾಯಗಳ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿದರು. ರಾಜ್ಯದ 60ಲಕ್ಷ ನೇಕಾರರ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ ಸ್ವಾಗತಾರ್ಹ. ನಿಗಮಕ್ಕೆ ಸೂಕ್ತ ಪ್ರಮಾಣದ ಅನುದಾನ ಒದಗಿಸುವ ಜತೆಗೆ ಸಮುದಾಯದ ಒಳ ಪಂಗಡಗಳ ಅರ್ಹ ಫಲಾನುಭವಿಗಳಿಗೂ ಸೂಕ್ತ ಪ್ರಾತಿನಿಧ್ಯತೆ ಒದಗಿಸುವಲ್ಲಿ ಸರ್ಕಾರ ಬದ್ಧತೆ ತೋರಬೇಕು. ತುರ್ತಾಗಿ ನಿಗಮ ಕಾರ್ಯಾರಂಭಕ್ಕೆ ಆಸಕ್ತಿ ವಹಿಸಬೇಕು. ನೇಕಾರರ ಮಕ್ಕಳಿಗೂ ನೇಕಾರ ವಿದ್ಯಾನಿಧಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ನೇಕಾರ ಸಮುದಾಯಗಳ ಸಂಘದ ಪದಾಧಿಕಾರಿಗಳಾದ ಜಿ.ಸುಧಾಕರ, ಗದ್ಗಿ ವಿರೂಪಾಕ್ಷಿ, ಮಾ.ಶ್ರೀನಿವಾಸ್, ಟಿ.ಹನುಮಂತಪ್ಪ, ಎಂ.ವೆಂಕಟೇಶ್, ಜಗದೀಶ ಪೂಜಾರ್, ಟಿ.ವಿಜಯಕುಮಾರ್, ಜಿ.ನಾಗೇಶ್ವರರಾವ್ ಇತರರಿದ್ದರು.