More

    ಕಂಬಳ ಓಟಗಾರ ಅಶ್ವತ್ಥಪುರ ಶ್ರೀನಿವಾಸ ಗೌಡ ಈಗ ಬಹುಭಾಷಾ ನಟ!

    ಯಶೋಧರ ವಿ. ಬಂಗೇರ ಮೂಡುಬಿದಿರೆ
    ಕಂಬಳ ಕ್ರೀಡೆಯಲ್ಲಿ ಶರವೇಗದ ಓಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೂಡುಬಿದಿರೆ ಅಶ್ವತ್ಥಪುರದ ಶ್ರೀನಿವಾಸ ಗೌಡ ಹಿಂದೆ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಈಗ ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    2017ರಲ್ಲಿ ತೆರೆಕಂಡ “ಬಾಹುಬಲಿ 2′ ತೆಲುಗು ಸಿನಿಮಾದ ದೃಶ್ಯವೊಂದರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಶ್ರೀನಿವಾಸ ಗೌಡರು, ಈಗ ಕಂಬಳ ಕಥಾಹಂದರ ಹೊಂದಿರುವ ‘ಬಿರ್ದ್‌ದ ಕಂಬಳ’ ತುಳು ಹಾಗೂ ‘ವೀರ ಕಂಬಳ’ ಕನ್ನಡ ಸಿನಿಮಾದಲ್ಲಿ ಎರಡನೇ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿರುವ, ಅರುಣ್ ರೈ ತೋಡಾರು ನಿರ್ಮಾಣದ ಚಲನಚಿತ್ರಕ್ಕೆ ತುಳು ಸಿನಿಮಾ, ನಾಟಕ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲು ಚಿತ್ರಕಥೆ ಬರೆದಿದ್ದಾರೆ.

    ಸಿನಿಮಾಗಳ ಕಂಬಳ ಲಿಂಕ್:
    ಬಾಹುಬಲಿ -2 ಸಿನಿಮಾದಲ್ಲಿ ಗೂಳಿ ಓಡಿಸುವ ದೃಶ್ಯದಲ್ಲಿ ಕಾಣಿಸಿಕೊಂಡ ಶ್ರೀನಿವಾಸ ಗೌಡರು ಆ ಸಮಯದಲ್ಲಿ ಕಂಬಳದ ಎ ಗ್ರೇಡ್ ಓಟಗಾರರಾಗಿದ್ದರು. ಗೂಳಿ ಓಡಿಸುವ ದೃಶ್ಯಕ್ಕೆ ತರಬೇತಿ ನೀಡಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 10 ಓಟಗಾರರಲ್ಲಿ ಅವರು ಒಬ್ಬರು. ಗೂಳಿಗಳನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಪಳಗಿಸುತ್ತಿದ್ದ ಗೌಡರನ್ನು ಆ ದೃಶ್ಯಕ್ಕೆ ಆಯ್ಕೆ ಮಾಡಲಾಯಿತು. ಇನ್ನು ಚಿತ್ರೀಕರಣ ಹಂತದಲ್ಲಿರುವ ಬಿರ್ದ್‌ದ ಕಂಬಳ / ವೀರ ಕಂಬಳ ಸಿನಿಮಾದಲ್ಲೂ ಶ್ರೀನಿವಾಸ ಗೌಡರು ಕಂಬಳ ಓಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂರು ಸಿನಿಮಾಗಳಲ್ಲೂ ಓಟಗಾರನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

    ಮೊದಲು ಗುರುತಿಸಿದ್ದು ‘ವಿಜಯವಾಣಿ’:
    ಕಂಬಳ ಕ್ಷೇತ್ರದ ಪ್ರಮುಖ ಓಟಗಾರರಲ್ಲಿ ಇಂದು ಶ್ರೀನಿವಾಸ ಗೌಡರು ಒಬ್ಬರು. 2017ರಲ್ಲಿ ಅವರು ಕಂಬಳದ ಯುವ ಓಟಗಾರನಾಗಿ ಕಾಣಿಸಿಕೊಂಡಿದ್ದು, ಅದೇ ಸಂದರ್ಭದಲ್ಲಿ ತೆಲುಗಿನ ಬಾಹುಬಲಿ ಸಿನಿಮಾದಲ್ಲಿ ನಟಿಸಿದ್ದರು. ಕಂಬಳದ ದಾಖಲೆ ಓಟಗಾರನಾಗಿದ್ದ ಶ್ರೀನಿವಾಸ ಗೌಡರವರ ಸಾಧನೆ, ಸಿನಿಮಾದಲ್ಲಿ ಪ್ರಥಮ ಬಾರಿಗೆ ಅವರು ಕಾಣಿಸಿಕೊಂಡದ್ದನ್ನು ವಿಜಯವಾಣಿ ಗುರುತಿಸಿ, ನಾಡಿಗೆ ಪರಿಚಯಿಸಿತ್ತು.

    ಕೋಣಗಳನ್ನು ಓಡಿಸುವುದಕ್ಕಿಂತ ಸಿನಿಮಾದಲ್ಲಿ ಪಾತ್ರ ಮಾಡುವುದು ಬಹಳ ಕಷ್ಟ. ತುಳು ಚಿತ್ರರಂಗದ ದಿಗ್ಗಜರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು ಅವರ ಸಹಕಾರದಿಂದಾಗಿ ಪಾತ್ರ ಮಾಡಲು ಸುಲಭವಾಯಿತು. ತೆಲುಗು ಸಿನಿಮಾದಲ್ಲೂ ಕಾಣಿಸಿಕೊಂಡಿರುವುದಕ್ಕೆ ಖುಷಿ ಇದೆ. ಇಂದು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮುಖ್ಯ ಕಾರಣ ಕಂಬಳ ನನ್ನ ಮೇಲೆ ಬೀರಿರುವ ಪ್ರಭಾವ.

    – ಶ್ರೀನಿವಾಸ ಗೌಡ, ಕಂಬಳದ ದಾಖಲೆಯ ಓಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts