ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣೇಶ ಹಾಗೂ ಬಸವಣ್ಣ ದೇವಸ್ಥಾನ ಸುತ್ತಮುತ್ತ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭಗೊಂಡಿದ್ದು, ಕಂಡಲ್ಲೆಲ್ಲ ಕಡಲೆಕಾಯಿ ಎಂಬಂಥ ದೃಶ್ಯ ಕಾಣಲಾರಂಭಿಸಿದೆ.
ಪರಿಷೆಯ ಸಂಭ್ರಮ ಈಗಾಗಲೇ ಶುರುವಾಗಿದ್ದು, ಸಾರ್ವಜನಿಕರು ದಂಡುದಂಡಾಗಿ ಆಗಮಿಸಲಾರಂಭಿಸಿದ್ದಾರೆ. ಬಸವನಗುಡಿ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ ರಾಶಿಗಳನ್ನು ಹಾಕಲಾಗಿದ್ದು, ಜಾತ್ರೆಯ ವಾತವಾರಣ ಕಳೆಗಟ್ಟಿದೆ. ದೂರದ ಹಳ್ಳಿಗಳಿಂದ ರೈತರು ಕಡಲೆಕಾಯಿ ತಂದು ಮಾರಾಟ ಮಾಡುತ್ತಿದ್ದು, ಬಸವನಗುಡಿಯ ದೃಶ್ಯ ಅದರ ಹಿಂದಿನ ಹೆಸರಿನಲ್ಲಿದ್ದಂತೆ ಸುಂಕೇನಹಳ್ಳಿಯಂತೆ ಕಾಣಿಸಲಾರಂಭಿಸಿದೆ.
ಕಳೆದ ಎರಡು ವರ್ಷ ಕರೊನಾ ಕಾರಣಕ್ಕೆ ಪರಿಷೆ ನಡೆಯದ್ದರಿಂದ ಈ ಸಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈಗಾಗಲೇ ಪರಿಷೆಯ ಸಂಭ್ರಮ, ಜನಜಾತ್ರೆ ಆರಂಭಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನೇನು ಕೆಲವೇ ನಿಮಿಷಗಳಲ್ಲಿ ಅಧಿಕೃತವಾಗಿ ಪರಿಷೆಯನ್ನು ಉದ್ಘಾಟಿಸಲಿದ್ದಾರೆ. ಇಂದು ಆರಂಭವಾದ ಕಡಲೆಕಾಯಿ ಪರಿಷೆ ಕಾರ್ತಿಕದ ಕೊನೆಯ ಸೋಮವಾರವಾದ ನಾಳೆಯೂ ಇರಲಿದೆ.
ರಾಜ್ಯದ ಮೂಲೆಮೂಲೆಯ, ಹೊರರಾಜ್ಯ, ಹೊರದೇಶಗಳ ಪ್ರವಾಸಿಗರೂ ಈ ಪರಿಷೆಗೆ ಆಗಮಿಸಿ ಇಲ್ಲಿನ ಹಬ್ಬದ ದೃಶ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಮಾತ್ರವಲ್ಲ, ನಾಡಿನ ಜನರು ಭಾರಿ ಸಂಖ್ಯೆಯಲ್ಲಿ ಬಂದು ಕಡಲೆಯನ್ನು ಖರೀದಿಸಿ ಸಂಭ್ರಮಿಸುತ್ತಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಸಾರ್ವಜನಿಕರಿಗಾಗಿ ಹಲವು ಮನರಂಜನೆಯ ಆಟಗಳ ವ್ಯವಸ್ಥೆಯೂ ಏರ್ಪಟ್ಟಿದೆ.
ಸಾರ್ವಜನಿಕರಿಗೆ ಎಪಿಎಸ್ಕಾಲೇಜು ಆಟದ ಮೈದಾನ ಮತ್ತು ಕೋಹಿನೂರು ಆಟದ ಮೈದಾನದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರಿಗೆ ದೇಗುಲದಲ್ಲಿ ದರ್ಶನ ಪಡೆಯಲು ಹಲವು ಕಡೆ ಎಲ್ಇಡಿ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಹಿತಕರ ಚಟುವಟಿಕೆಗಳನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ, ಭಕ್ತರಿಗೆ ಮಾರ್ಗದರ್ಶನ ನೀಡಲು ಹೋಂಗಾರ್ಡ್ ಹಾಗೂ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ, ತುರ್ತು ಸಂದರ್ಭದಲ್ಲಿ ಮಕ್ಕಳು, ವೃದ್ಧರ ಅನುಕೂಲಕ್ಕಾಗಿ ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ವ್ಯಾಪಾರಸ್ಥರಿಗೆ ಸುಮಾರು 2 ಸಾವಿರ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲು ಬೀದಿಬದಿಯಲ್ಲಿ ಅನುಕೂಲ ಕಲ್ಪಿಸಲಾಗಿದೆ. ಮಾತ್ರವಲ್ಲ, ವಿದ್ಯುದ್ದೀಪಗಳಿಂದ ಬಸವನಗುಡಿಯ ಬೀದಿಯನ್ನು ಅಲಂಕರಿಸಲಾಗಿದ್ದು, ವರ್ಣರಂಜಿತವಾಗಿ ಕಂಗೊಳಿಸುತ್ತಿದೆ.
ಸೊಸೆ ಹಿಂಸೆ ಕೊಡುತ್ತಿದ್ದಾಳೆ, ಏನ್ ಮಾಡ್ಬೇಕು ಸಾಹೇಬ್ರೇ?: ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡ ಅತ್ತೆ..
ಆಸ್ಟ್ರೇಲಿಯನ್ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿ
ಬ್ರೂಸ್ ಲೀ ಸತ್ತ 49 ವರ್ಷಗಳ ಬಳಿಕ ಬಯಲಾಯ್ತು ಸಾವಿನ ರಹಸ್ಯ!; ಸಮರಕಲೆ ಪ್ರವೀಣ ಸತ್ತಿದ್ದು ಹೇಗೆ?