ಕೆ.ಆರ್.ನಗರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಎಂದು ತಹಸೀಲ್ದಾರ್ ಎಂ.ಮಂಜುಳಾ ತಿಳಿಸಿದರು.
ಪಟ್ಟಣದ ಬಿ.ಎಸ್.ಮಾದಪ್ಪ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪೋಲಿಯೋ ಬೂತ್ಗೆ ಸ್ವಾಗತ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಪಲ್ಸ್ಪೋಲಿಯೋ ಲಸಿಕೆ ಕಾರ್ಯಕ್ರಮ ಜ.19 ರಂದು ತಾಲೂಕಿನ ವ್ಯಾಪ್ತಿಯಲ್ಲಿ ಆರಂಭವಾಗಿ ನಿರಂತರವಾಗಿ 3 ದಿನಗಳ ಕಾಲ ಇರಲಿದ್ದು, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿರುವ ಚಿಕ್ಕ ಮಕ್ಕಳನ್ನು ಪೋಲಿಯೋ ಬೂತ್ಗೆ ಕರೆದೊಯ್ಯುವ ಮೂಲಕ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.
ದೇಶದಲ್ಲಿ ಶಿಶು ಮರಣ, ಅಂಗವಿಕಲತೆ ತಡೆಗಟ್ಟುವ ಸಲುವಾಗಿ ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಅದರಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮ ಪ್ರಮುಖವಾಗಿದೆ. ಆದ್ದರಿಂದ ಮಕ್ಕಳ ಆರೋಗ್ಯವಂತ ಭವಿಷ್ಯಕ್ಕಾಗಿ ಇದು ಕಡ್ಡಾಯವಾಗಿದೆ. ಈ ಲಸಿಕೆಯಿಂದ ಯಾವ ಮಗುವು ಹೊರಗುಳಿಯಬಾರದು ಎಂದು ತಿಳಿಸಿದರು.
ತಾಲೂಕಿನಲ್ಲಿ 178 ಬೂತ್: ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಂದ್ರಪ್ಪ ಮಾತನಾಡಿ, ತಾಲೂಕಿನಲ್ಲಿ 178 ಬೂತ್ಗಳಿದ್ದು, ಒಂದು ಬೂತ್ಗೆ 7 ಜನರಂತೆ ಸುಮಾರು 700 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ವಿವಿಧ ಸಂದೇಶಗಳನ್ನು ಸಾರುವ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಮೈಸೂರು ರಸ್ತೆಯ ಮೂಲಕ ಅರ್ಕನಾಥ ರಸ್ತೆ, ಬಜಾರ್ ರಸ್ತೆ, ವಾಣಿ ವಿಲಾಸ ರಸ್ತೆಗಳ ಮೂಲಕ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಂ.ಎಸ್.ನಾಗೇಂದ್ರ, ಹಿರಿಯ ವೈದ್ಯ ಡಾ.ಶಿವಶಂಕರ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಆರೋಗ್ಯ ಸಹಾಯಕರಾದ ಪಾರ್ವತಿ, ಲತಾ, ಪುಷ್ಪಾ, ಅಂಬರೀಷ್, ಸಿಆರ್ಪಿ ಎಚ್.ಎಸ್.ಈಶ್ವರ್, ಮುಖ್ಯಶಿಕ್ಷಕಿ ವಿನುತಾ ಇದ್ದರು.