ಲಿಂಗಸುಗೂರು: ರಾಜ್ಯದಲ್ಲಿ ಸರ್ಕಾರ ರಚನೆ ವೇಳೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಿಂಗ್ ಮೇಕರ್ ಆಗಲಿದ್ದು, ಈ ಬಾರಿ ಚುನಾವಣೆಯಲ್ಲಿ ಕೆಆರ್ಪಿಪಿಯ 25 ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ಪಕ್ಷದ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ಆರ್.ರುದ್ರಯ್ಯ ಪರ ರೋಡ್ ಶೋ
ಪಟ್ಟಣದಲ್ಲಿ ಅಭ್ಯರ್ಥಿ ಆರ್.ರುದ್ರಯ್ಯ ಪರ ರೋಡ್ ಶೋ ನಡೆಸಿ ಶನಿವಾರ ಮಾತನಾಡಿದರು. ಪಂಚ ನದಿಗಳ ಬೀಡು ಎಂದು ಕರೆಯಲಾಗುವ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಕೆಆರ್ಪಿಪಿ ಬದ್ಧವಾಗಿದೆ. ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದರೆ ಪಂಚ ನದಿಗಳನ್ನು ಜೋಡಿಸಿ ಸಮನಾಂತರ ಜಲಾಶಯ ನಿರ್ಮಿಸಲಾಗುವುದು. ಈ ಮೂಲಕ ಕೃಷಿಗೆ ಮತ್ತು ಕುಡಿಯಲು ಸಮರ್ಪಕ ನೀರು ಒದಗಿಸುವ ಯೋಜನೆ ರೂಪಿಸಲಾಗುವುದು ಎಂದರು.
ಇದನ್ನೂ ಓದಿ: ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳ ಹೆಸರಲ್ಲಿ ನಾನಾ ಯೋಜನೆ; ಕೆಆರ್ಪಿಪಿಯ ಪ್ರಣಾಳಿಕೆ ಪ್ರಕಟ
ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ, ಮೂಲ ಸೌಕರ್ಯ, ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಯಾವುದೇ ತತ್ವ, ಸಿದ್ಧಾಂತಗಳಿಲ್ಲದೆ ಬಿಜೆಪಿ ವ್ಯಾಪಾರೀಕರಣದ ಪಕ್ಷವಾಗಿದೆ. ದೆಹಲಿಯಿಂದ ಆಗಮಿಸುವ ಪಕ್ಷದ ನಾಯಕರು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ರಚಿಸುವ ಗುಂಗಿನಲ್ಲಿದ್ದಾರೆ ಎಂದು ಟೀಕಿಸಿದರು.