ಗುಡೂರ ಎಸ್ಸಿ: ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕ ಸಂಭ್ರಮ-50 ರ ಜ್ಯೋತಿ ರಥಯಾತ್ರೆ ಮೆರವಣಿಗೆ ಬುಧವಾರ ಗ್ರಾಮದಲ್ಲಿ ನಡೆಯಿತು.
ಸಿದ್ಧರಾಮೆಶ್ವರ ದೇವಾಲಯದ ಮುಂಭಾಗದಲ್ಲಿ ರಥಕ್ಕೆ ಇಳಕಲ್ಲ ತಹಸೀಲ್ದಾರ್ ಸತೀಶ ಕೂಡಲಗಿ ಪುಷ್ಪ ಸಮರ್ಪಣೆ ಚಾಲನೆ ನೀಡಿದರು. ನಂತರ ಹುನಗುಂದ ರಸ್ತೆ, ಮಳಿಯಪ್ಪನ ದೇವಾಲಯ, ಗ್ರಾಮ ಪಂಚಾಯಿತಿ, ಕನ್ನಡ ಶಾಲೆ, ಬಸ್ ನಿಲ್ದಾಣ, ಬಾದಾಮಿ ಕ್ರಾಸ್ ಮಾರ್ಗವಾಗಿ ಬನ್ನಿ ಕಟ್ಟಿ ತಲುಪಿತು.
ಡೊಳ್ಳು ಕುಣಿತ, ಕೋಲಾಟ, ಕುಂಭ, ವಿದ್ಯಾರ್ಥಿಗಳ ಮಹಾನ್ ನಾಯಕರ ವೇಷಭೂಷಣ ಹಾಗೂ ನೃತ್ಯ ಜನರ ಮನ ಸೆಳೆಯಿತು. ನಂತರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇಳಕಲ್ಲ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ಪಿಡಿಒ ಬಸವರಾಜ ರೇವಡಿ, ಗ್ರಾಪಂ ಅಧ್ಯಕ್ಷ ಶಶಿಧರ ಮ್ಯಾಗೇರಿ, ಮಹಾಂತೇಶ ತಿಪ್ಪನ್ನವರ, ಮುದಕಪ್ಪ ಮಾದರ, ಮಹಾಂತೇಶ ಹುಲ್ಯಾಳ, ಸಲೀಂ ಜರತಾರಿ, ರಿಯಾಜ್ ವಾಲಿಕಾರ, ಎಸ್.ಬಿ.ಕೋರಿಶೆಟ್ಟಿ, ಗುರುಸ್ವಾಮಿ ಬಿಲ್ಲೂರ, ಶಶಿಕಾಂತ ಭಜಂತ್ರಿ, ಹುಲ್ಲಪ್ಪ ತೊಟ್ಲಪ್ಪನವರ ಇತರರು ಇದ್ದರು.