ಗಾಜಿಯಾಬಾದ್: ತಮ್ಮ ಸಹೋದರ ಸಂಬಂಧಿ ಯುವತಿಯೊಬ್ಬಳಿಗೆ ಕಿರುಕುಳ ನೀಡುತ್ತಿರುವ ಕುರಿತು ದೂರು ದಾಖಲು ಮಾಡಿದ ಕಾರಣಕ್ಕೆ ಕಳೆದ ಸೋಮವಾರ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಒಳಗಾಗಿದ್ದ ಉತ್ತರಪ್ರದೇಶದ ಗಾಜಿಯಾಬಾದ್ ಪತ್ರಕರ್ತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ವಿಕ್ರಮ್ ಜೋಶಿ ಎಂಬ ಪತ್ರಕರ್ತ ಮೃತರಾದವರು. ದುಷ್ಕರ್ಮಿಗಳ ವಿರುದ್ಧ ಪೊಲೀಸರಲ್ಲಿ ದೂರು ದಾಖಲು ಮಾಡಿದರೂ ಅವರು ಆರೋಪಿಗಳ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳದಿರುವುದೇ ಈ ಘಟನೆಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗುಂಡು ಹಾರಿಸಿದ ಬಳಿಕವಷ್ಟೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಮೊದಲು ದೂರು ದಾಖಲಿಸಿಕೊಳ್ಳಲು ವಿಫಲರಾಗಿದ್ದ ಇಬ್ಬರು ಪೊಲೀಸರ ವಿರುದ್ಧ ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ, ಗುಂಡಿನ ದಾಳಿಯ ನಂತರವಷ್ಟೇ ಅಮಾನತು ಮಾಡಿದೆ.
ಇದನ್ನೂ ಓದಿ: ಅಂಡರ್ವೇರ್ ಚಿಕ್ಕದಾಯ್ತೆಂದು ಟೈಲರ್ ವಿರುದ್ಧ ಕೋರ್ಟ್ ಕೇಸ್!
ಕಳೆದ ಸೋಮವಾರ ವಿಕ್ರಮ್ ಜೋಶಿ ತಮ್ಮ ಮಕ್ಕಳ ಜತೆ ಬೈಕ್ನಲ್ಲಿ ಬರುತ್ತಿದ್ದ ವೇಳೆ, ಕೆಲ ಜನರು ಇರುವ ಗುಂಪೊಂದು ಅವರನ್ನು ತಡೆದು ಗುಂಡಿನ ದಾಳಿ ನಡೆಸಿದೆ. ಆ ಸಮಯದಲ್ಲಿ ಬೆದರಿದ ಮಕ್ಕಳು ಓಡಿಹೋಗಿದ್ದಾರೆ. ಅದಾದ ನಂತರ ಹಲ್ಲೆಕೋರರು ಜೋಶಿಯನ್ನು ಕಾರಿನ ಕಡೆಗೆ ಎಳೆದುಕೊಂಡು ನಂತರ ಸ್ಥಳದಿಂದ ಪಲಾಯನ ಮಾಡಿರುವುದು, ಆ ಗುಂಪು ಹೋದ ಮೇಲೆ ಮಕ್ಕಳು ಓಡಿ ಬಂದು ಸಹಾಯಕ್ಕಾಗಿ ಕಿರುಚಾಡಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.
ಘಟನೆಯಲ್ಲಿ ಜೋಶಿ ಅವರಿಗೆ ಗಂಭೀರ ಗಾಯಗಳಾಗಿದ್ದವು. ಒಂದು ಗುಂಡು ತಲೆಗೆ ಹೊಕ್ಕಿದ್ದರಿಂದ ಅವರು ಬದುಕುವುದು ಕಷ್ಟ ಎಂದೇ ವೈದ್ಯರು ಹೇಳಿದ್ದರು.
ಸಂಫೂರ್ಣ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪ್ರಕರಣದಲ್ಲಿ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ರಾಜಕೀಯ ತಿರುವು ಪಡೆದಿದ್ದು, ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ ಶುರುವಾಗಿದೆ. (ಏಜೆನ್ಸೀಸ್)