More

    ಯುವ ಪತ್ರಕರ್ತರಿಗೆ ಪತ್ರಿಕೋದ್ಯಮದ ತಿಳುವಳಿಕೆ ಅಗತ್ಯ: ಎಚ್.ಕೆ. ಪಾಟೀಲ

    ಗದಗ: ಜಿಲ್ಲೆ, ರಾಜ್ಯ, ರಾಷ್ಟ್ರದ ಬದಲಾವಣೆಗೆ ಕಾರಣವಾಗುವಂತಹ ಸುದ್ದಿಗಳು ಕೂಡ ಇಂದು ಜಿಲ್ಲಾ ಮಟ್ಟಕ್ಕೆ ಸೀಮಿತಗೊಳ್ಳುತ್ತಿರುವುದು ವಿಷಾದನೀಯ. ಮಹತ್ವದ ಸುದ್ದಿಗಳನ್ನು ಎಲ್ಲ ಆವೃತ್ತಿಯಲ್ಲಿ ಪ್ರಕಟಿಸುವ ನಿಟ್ಟಿನಲ್ಲಿ ಪತ್ರಿಕೆಗಳು ಯೋಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಅಭಿಪ್ರಾಯಪಟ್ಟರು.

    ನಗರದ ಶ್ರೀನಿವಾಸ ಭವನದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ‘ಅವ್ವ’ ಟ್ರಸ್ಟ್‌ನವರು ಸ್ಥಾಪಿಸಿರುವ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ‘ಜನಕಲ್ಯಾಣ ಮಾಡುತ್ತಿರುವ ಜನಸೇವಕರು, ಬೆಳೆಯುತ್ತಿರುವ ನಾಯಕರು,ಕಲಾವಿದರು, ಸಂಗೀತಗಾರರು, ಕ್ರೀಡಾಪಟುಗಳ ಸಾಧನೆಯನ್ನು ಪತ್ರಿಕೆಗಳಲ್ಲಿ ಕೇವಲ ಜಿಲ್ಲೆಗೆ ಸೀಮಿತಗೊಳಿಸುತ್ತಿರುವುದರಿಂದ ಅನ್ಯಾಯವಾಗುತ್ತಿದೆ. ಸ್ಥಳೀಯವಾಗಿ ನಡೆದ ಸುದ್ದಿಗಳನ್ನು ರಾಜ್ಯ ಮಟ್ಟದಲ್ಲಿ ಬಿತ್ತರಿಸುವಂತಾದಾಗ ಹೆಸರು ಗಳಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

    ‘ಪತ್ರಿಕೋದ್ಯಮ ಮತ್ತು ಸ್ವಾತಂತ್ರ‍್ಯ, ಪತ್ರಿಕೋದ್ಯಮ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯ ಕುರಿತು ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಯುವ ಪತ್ರಕರ್ತರಿಗೆ ಪತ್ರಿಕೋದ್ಯಮದ ತಿಳಿವಳಿಕೆ ನೀಡಬೇಕು.ಯಾವುದು ಸತ್ಯ, ಯಾವುದು ಅಸತ್ಯ, ಯಾವುದು ಸಮಾಜಕ್ಕೆ ಒಳ್ಳೆಯದನ್ನು ಗುರುತಿಸಿ ಓದುಗರಿಗೆ ಸುದ್ದಿಯನ್ನು ಕೊಡಬೇಕು’ ಎಂದು ತಿಳಿಸಿದರು.

    ‘ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಿಎಂ ಅವರೊಂದಿಗೆ ಚರ್ಚಿಸಲಾಗುವುದು. ಅದರ ಅನುಷ್ಠಾನಕ್ಕೆ ಇರುವ ತೊಡಕುಗಳನ್ನು ನಿವಾರಿಸಿ, ಮುಂದಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದೊಳಗಾಗಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ವ್ಯವಸ್ಥೆ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡಲಿದೆ’ ಎಂದು ತಿಳಿಸಿದರು.

    ‘ಪತ್ರಕರ್ತರಾಗಿ, ವಿಶಾಲ ಕರ್ನಾಟಕ ಪತ್ರಿಕೆ ಸ್ಥಾಪಿಸಿ, ಸಂಪಾದಕರಾಗಿ ಕೆಲಸ ಮಾಡಿರುವ ಕೆ.ಎಚ್. ಪಾಟೀಲ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ, ಮುಂದಿನ ವರ್ಷದಿಂದ ಎರಡು ಪ್ರಶಸ್ತಿ ವಿತರಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

    ಡಾ. ಬಸವರಾಜ ಧಾರವಾಡ ಮಾತನಾಡಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ತಾಯಿ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಸ್ಮರಣಾರ್ಥ ಸ್ಥಾಪಿಸಿರುವ ‘ಅವ್ವ ಸೇವಾ ಟ್ರಸ್ಟ್’ ಕಳೆದ 13 ವರ್ಷಗಳಿಂದ ವಿವಿಧ ರಚನಾತ್ಮಕ ಕಾರ್ಯಗಳ ಮೂಲಕ ಸಮಾಜ ಸೇವೆಗೆ ಸಮರ್ಪಿಸಿಕೊಂಡಿದೆ. ಅದೇ ಮಾದರಿಯಲ್ಲಿ ಅವ್ವ ಸೇವಾ ಟ್ರಸ್ಟ್ ಮೂಲಕ ಸ್ಥಾಪಿಸಿರುವ ದತ್ತಿನಿಧಿಯಲ್ಲಿ ಪತ್ರಿಕಾ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ರಶ್ಮಿ ಎಸ್. ಅವರಿಗೆ ನೀಡಿರುವ ಮೊದಲ ಪ್ರಶಸ್ತಿ ಉತ್ತಮ ಆಯ್ಕೆಯಾಗಿದೆ’ ಎಂದು ತಿಳಿಸಿದರು.

    ಪತ್ರಕರ್ತೆ ರಶ್ಮಿ ಎಸ್. ಅವರಿಗೆ ದತ್ತಿನಿದಿ ಪುರಸ್ಕಾರ ವಿತರಿಸಲಾಯಿತು.

    ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಬಸವರಾಜ ಹೊರಟ್ಟಿ ಅವರು ಅವರ ಮಾತೋಶ್ರೀ ಅವರ ಹೆಸರಿನಲ್ಲಿ ಎಲೆಮರೆಯ ಕಾಯಿಯಂತಹ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕೆಲಸವನ್ನು ಮಾಡುವುದು ಉತ್ತಮ ಕೆಲಸವಾಗಿದೆ. ಮಕ್ಕಳಿಗೆ ಸನ್ಮಾನ ಮಾಡುವ ಮೂಲಕ ಅವರಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಲು ಈ ಸನ್ಮಾನ ಪೂರಕವಾಗಿದೆ ಎಂದು ತಿಳಿಸಿದರು.

    ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಉತ್ತಮವಾಗಿ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಿದರೆ ಇನ್ನೂ ಹೆಚ್ಚು ಒಳ್ಳೆಯ ಕೆಲಸವಾಗುತ್ತವೆ ಎಂಬುದಕ್ಕೆ ಗದಗ ಜಿಲ್ಲಾ ಪತ್ರಕರ್ತರ ಸಂಘ ಸಾಕ್ಷಿಯಾಗಿದೆ. ಅವ್ವ ಸೇವಾ ಟ್ರಸ್ಟ್‌ನ ದತ್ತಿನಿಧಿ ಪ್ರಶಸ್ತಿಯನ್ನು ರಶ್ಮಿ ಅವರಿಗೆ ನೀಡಿರುವುದು ಸಾರ್ಥಕವಾಗಿದೆ. ಹೀಗಾಗಿ ನನ್ನ ತಾಯಿ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಭಾವಿಸಿದ್ದೇನೆ ಎಂದರು.

    ಹೆತ್ತ ತಂದೆ-ತಾಯಿ, ಕಲಿತಿರುವ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಕಳೆದ 13 ವರ್ಷಗಳಿಂದ ಅವ್ವ ಸೇವಾ ಟ್ರಸ್ಟ್ ಮೂಲಕ ರಾಜ್ಯಾದ್ಯಂತ ಹಲವು ರಚನಾತ್ಮಕ ಕಾರ್ಯಗಳನ್ನು ಮಾಡಲಾಗಿದೆ. ಡಿ. 6ರಂದು ಪ್ರತಿವರ್ಷ ತಾಯಿ ನೆನಪಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಕಾರ್ಯಕ್ರಮಗಳನ್ನು ವೀಕ್ಷಿಸಿದ 9 ಕುಟುಂಬಗಳು ದೂರವಿಟ್ಟಿದ್ದ ತಮ್ಮ ತಂದೆ-ತಾಯಿಯನ್ನು ಪುನಃ ಮನೆಗೆ ಕರೆದುಕೊಂಡು ಅಕ್ಕರೆ ತೋರುತ್ತಿದ್ದಾರೆ ಎಂದು ಹೇಳಿದರು.

    ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 80ಕ್ಕೂ ಅಧಿಕ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಾದ ಅನಘಾ ಬಿ. ಕುಲಕರ್ಣಿ, ಪ್ರಣವಸಿಂಗ್ ಜಮಾದಾರ, ಚಕ್ರವರ್ತಿ ಕಾಶೀನಾಥ ಬಿಳಿಮಗ್ಗದ, ಕೀರ್ತಿ ಸಂಗಪ್ಪ ಮೆಣಸಗಿ, ಸ್ವಾತಿ ಎಸ್. ಕುಷ್ಟಗಿ, ಆದರ್ಶ ಸಿ. ಗಣಪ್ಪನವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಕುದರಿಮೋತಿ, ವಾರ್ತಾಧಿಕಾರಿ ವಸಂತ ಮಡ್ಲೂರ ಪತ್ರಕರ್ತರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts