ಬೆಂಗಳೂರು: ವಸಂತನಗರದ ಮೌಂಟ್ ಕಾರ್ವೆಲ್ ಕಾಲೇಜು ಬಳಿಯ ಅಂಡರ್ ಪಾಸ್ನಲ್ಲಿ ಪಿಲ್ಲರ್ಗೆ ಏ.3 ರ ತಡರಾತ್ರಿ ನಟಿ ಶರ್ವಿುಳಾ ಮಾಂಡ್ರೆ ಮತ್ತು ಸ್ನೇಹಿತ ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರು ಡಿಕ್ಕಿ ಹೊಡೆದ ಪ್ರಕರಣ ನಿಗೂಢವಾಗಿಯೇ ಉಳಿದಿದೆ.
ಅಪಘಾತದಲ್ಲಿ ಮುಖಕ್ಕೆ ಗಂಭೀರ ಗಾಯಗೊಂಡ ಕಾರಣ ಹೆಬ್ಬಾಳ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಶರ್ವಿುಳಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲ್ಲ ಸೇರಿ ಎಡಬದಿ ಮುಖಕ್ಕೆ ಸರ್ಜರಿ ಮಾಡಲಾಗಿದೆ. ಗುಣಮುಖರಾದ ಬಳಿಕ ಹೇಳಿಕೆ ದಾಖಲಿಸಲಿದ್ದಾರೆ ಎಂದು ಅವರ ಸಹೋದರ ಅಮಿತ್ ಮಾಂಡ್ರೆ ಹೈಗ್ರೌಂಡ್ಸ್ ಸಂಚಾರ ಠಾಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ಬೆಳಗ್ಗೆ ಸಂಚಾರ ಠಾಣೆಗೆ ಭೇಟಿ ನೀಡಿದ ಅಮಿತ್, ತನ್ನ ಸಹೋದರಿ ಕುರಿತು ಸ್ಪಷ್ಟನೆ ನೀಡಲು ಮುಂದಾಗಿದ್ದರು. ಅದಕ್ಕೆ ಒಪ್ಪದ ಇನ್ಸ್ಪೆಕ್ಟರ್, ಶರ್ವಿುಳಾ ಅವರೇ ಖುದ್ದಾಗಿ ಬಂದು ಹೇಳಿಕೆ ನೀಡಬೇಕು ಎಂದು ತಾಕೀತು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತ್ ಠಾಣೆಯಿಂದ ಹಿಂದಿರುಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರದಿ ಬಳಿಕ ಎಫ್ಐಆರ್: ಅಪಘಾತ ಕ್ಕೀಡಾದ ಜಾಗ್ವಾರ್ ಕಾರಿನಲ್ಲಿ ನಿಷೇಧಾಜ್ಞೆ ವಿನಾಯಿತಿ ಪಾಸ್ (ಕೆಎಸ್ಪಿ ಕ್ಲಿಯರ್ ಪಾಸ್) ಪತ್ತೆಯಾಗಿತ್ತು. ಕಾರು ಮಾಲೀಕ ಡಾನ್ ಥಾಮಸ್ ಹೆಸರಿನಲ್ಲಿ ಪಾಸ್ ಇದೆ. ಆತ, ಹೋಟೆಲ್ ಮತ್ತು ಕ್ಯಾಟರಿಂಗ್ವ್ಯವಹಾರ ನಡೆಸುತ್ತಾರೆ. ಅದರ ಹೆಸರಿನಲ್ಲಿ ಪಾಸ್ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಆದರೆ, ಇಲ್ಲಿಯವರೆಗೂ ಪಾಸ್ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಸಿವಿಲ್ ಠಾಣೆಗೆ ಸಂಚಾರ ಠಾಣೆ ಪೊಲೀಸರು ವರದಿ ನೀಡಿಲ್ಲ. ಅಪಘಾತದ ತನಿಖಾಧಿಕಾರಿ ನೀಡುವ ವರದಿ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳುವುದಾಗಿ ಕೇಂದ್ರ ವಿಭಾಗ ಡಿಸಿಪಿ ಡಾ. ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಪೊಲೀಸರ ಮೇಲೆ ಒತ್ತಡ: ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳ ಮಕ್ಕಳ ಜಾಲಿರೈಡ್ ವೇಳೆ ಅಪಘಾತ ಸಂಭವಿಸಿದಾಗ ಪೊಲೀಸರ ಮೇಲೆ ಪ್ರಭಾವಿ ವ್ಯಕ್ತಿಗಳ ಒತ್ತಡ ಹೆಚ್ಚಾಗಿ ಇರುತ್ತದೆ. ಈ ಪ್ರಕರಣದಲ್ಲಿಯೂ ಸಂಚಾರ ಪೊಲೀಸರು ಮುಕ್ತ ತನಿಖೆ ನಡೆಸಲು ಪ್ರಭಾವಿ ವ್ಯಕ್ತಿಗಳು, ರಾಜಕೀಯ ಮುಖಂಡರು ಬಿಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ನಟಿ ಶರ್ವಿುಳಾ ಮಾಂಡ್ರೆ ಮತ್ತು ಆಕೆಯ ಸ್ನೇಹಿತರನ್ನು ಪ್ರಕರಣದಿಂದ ಪಾರು ಮಾಡುವ ಯತ್ನ ನಡೆದಿದೆ ಎನ್ನಲಾಗಿದೆ.
ಸ್ಟೇ ಹೋಮ್, ಸ್ಟೇ ಸೇಫ್ ಅಂದವರೇ ಯಾಕೆ ಹೀಗೆ ಮಾಡಿದರು?
ಪಾಸ್ ದುರುಪಯೋಗ ಆರೋಪ: ಲಾಕ್ಡೌನ್ ಹಿನ್ನೆಲೆಯಲ್ಲಿ ಪೊಲೀಸರು ನೀಡಿದ ಪಾಸ್ ದುರ್ಬಳಕೆ ಮಾಡಿ ತಡರಾತ್ರಿಯಲ್ಲಿ ಜಾಲಿರೈಡ್ ನಡೆಸಿ ಅಪಘಾತಕ್ಕೆ ಕಾರಣವಾದ ಸ್ಯಾಂಡಲ್ವುಡ್ ನಟಿ ಶರ್ವಿುಳಾ ಮಾಂಡ್ರೆ ಹಾಗೂ ಅವರ ಜತೆ ಇದ್ದವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಕೋರಿ ವಕೀಲೆ ಗೀತಾ ಮಿಶ್ರಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸತ್ಯಾಂಶ ಮರೆಮಾಚಲು ಯತ್ನ: ಅಪಘಾತದ ವೇಳೆ ಕಾರಿನಲ್ಲಿದ್ದ ಲೋಕೇಶ್ ಮತ್ತು ಜಾಗ್ವಾರ್ ಕಾರು ಮಾಲೀಕ ಡಾನ್ ಥಾಮಸ್ರಿಂದ ಅಪಘಾತದ ಕುರಿತು ಹೇಳಿಕೆ ಪಡೆಯಲಾಗಿದೆ. ಆದರೆ, ಇಬ್ಬರೂ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಅಪಘಾತವಾದ ದಿನದಿಂದಲೂ ಪ್ರಕರಣವನ್ನು ಮುಚ್ಚಿಡಲು ಹಾಗೂ ಸತ್ಯಾಂಶ ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ತನಿಖಾಧಿಕಾರಿ ಗಂಭೀರವಾಗಿ ಪರಿಗಣಿಸಿದ್ದಾರೆ. ಒಂದು ವೇಳೆ ಸುಳ್ಳು ಮಾಹಿತಿ ನೀಡಿದ್ದರೆ, ಕ್ರಮ ತೆಗೆದುಕೊಳ್ಳಲಾಗುತ್ತದೆ. ಶರ್ವಿುಳಾ ಹೇಳಿಕೆ ಪ್ರಮುಖವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.
ಕರೆಗಳ ಸಿಡಿಆರ್, ಸಿಸಿ ಕ್ಯಾಮರಾ ಮೊರೆ: ಅಪಘಾತದ ನಂತರ ಗಾಯಾಳುಗಳು ಸತ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ‘ಅಪಘಾತದ ವೇಳೆ ಕಾರಿನಲ್ಲಿ ಎಷ್ಟು ಜನರಿದ್ದರು, ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದರು. ಒಂದು ವೇಳೆ ಪಾರ್ಟಿ ಮಾಡಿದ್ದರೇ, ಎಲ್ಲಿ ಮಾಡಿದ್ದರು ಎಂಬ ಕುತೂಹಲ ಉಂಟಾಗಿದೆ. ಈ ಎಲ್ಲ ಮಾಹಿತಿ ಕಲೆ ಹಾಕುವ ಸಲುವಾಗಿ ಪೊಲೀಸರು ಮೊಬೈಲ್ ನಂಬರ್, ಸಿಡಿಆರ್ ಪಡೆಯಲು ಮುಂದಾಗಿದ್ದಾರೆ. ಜತೆಗೆ ರಸ್ತೆ ಬದಿ ಮತ್ತು ಸಿಗ್ನಲ್ಗಳ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಮೇಖ್ರಿ ಸರ್ಕಲ್ ಬಳಿ ಸರಣಿ ಅಪಘಾತ ಎಸಗಿದ್ದಾಗ ಇದೇ ಮಾದರಿಯಲ್ಲಿ ಸದಾಶಿವನಗರ ಪೊಲೀಸರು ಪ್ರಕರಣ ಪತ್ತೆಹಚ್ಚಿದ್ದರು.
ಜಾಲಿರೈಡ್ಗೆ ಹೋಗಿದ್ರಾ ನಟಿ ಶರ್ಮಿಳಾ ಮಾಂಡ್ರೆ?: ಅಪಘಾತದ ಬಗ್ಗೆ ಸುಳ್ಳು ಹೇಳಿದ್ದೇಕೆ?