More

    ದೇಶದ ಅಭಿವೃದ್ಧಿಗೆ ಕೈ ಜೋಡಿಸಿ

    ಸೋಮವಾರಪೇಟೆ: ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ ತಾಲೂಕು ಯುವ ಒಕ್ಕೂಟ ಹಾಗೂ ಬೆಟ್ಟದಳ್ಳಿ ಮಾನವತಾ ಯುವಕ ಸಂಘದ ಸಹಯೋಗದಲ್ಲಿ ಬೆಟ್ಟದಳ್ಳಿ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಯುವಜನೋತ್ಸವ ಆಯೋಜಿಸಲಾಗಿತ್ತು.

    ಕಾರ್ಯಕ್ರಮವನ್ನು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಯುವಜನರಲ್ಲಿ ಪ್ರತಿಭೆಗಳ ಪ್ರದರ್ಶನಕ್ಕೆ ಇಂತಹ ಕಾರ್ಯಕ್ರಮಕ್ಕೆ ಅತ್ಯವಶ್ಯ. ಯುವಜನತೆ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು. ಒಂದಷ್ಟು ಸಮಯವನ್ನು ಸಮಾಜಸೇವೆಗೆ ಮೀಸಲಿಡಬೇಕು. ಗ್ರಾಮೀಣಾಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿ ಆಗಬೇಕಿದೆ. ಈ ನಿಟ್ಟಿನಲ್ಲಿ ಯುವಜನರ ಸಬಲೀಕರಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಯುವಕ ಸಂಘಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ಯುವಕರು ದೇಶದ ಸಂಪತ್ತಾಗಿ ಪರಿವರ್ತನೆ ಆಗಬೇಕು. ಪೋಷಕರು ಮಕ್ಕಳ ಆಸಕ್ತಿಯನ್ನು ಗುರುತಿಸಿ, ಅವರ ಅಭಿಲಾಷೆಗೆ ತಕ್ಕಂತೆ ಪ್ರೋತ್ಸಾಹವನ್ನು ನೀಡಬೇಕು. ಮಕ್ಕಳಿಗೆ ಎಳವೆಯಲ್ಲೇ ಒಳ್ಳೆಯ ಹವ್ಯಾಸಗಳನ್ನು ಮೈಗೊಡಿಸಿಕೊಳ್ಳಲು ನೆರವಾದರೆ ಮುಂದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಂಡು ಸಮಾಜದ ಆಸ್ತಿಯಾಗಿ ಬೆಳೆಯುತ್ತಾರೆ ಎಂದರು.
    ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದಿರ್ಶಿಸಲು ಇಂತಹ ಮೇಳಗಳಲ್ಲಿ ಪಾಲ್ಗೊಳ್ಳಬೇಕು. ಸತತ ಪರಿಶ್ರಮದಿಂದ ಕಲೆ ಒಲಿಯುತ್ತದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ, ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ.ಸುಕುಮಾರ್, ಮಾಜಿ ಅಧ್ಯಕ್ಷ ಎಂ.ಪಿ.ರವಿ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಕೆ.ಸಿ.ಉದಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಸ್ಮಯಿ ಚಕ್ರವರ್ತಿ, ಮಾನವತಾ ಯುವಕ ಸಂಘದ ಅಧ್ಯಕ್ಷ ಬಿ.ಸಿ.ಆದರ್ಶ್, ವಕೀಲ ಬಿ.ಇ.ಜಯೇಂದ್ರ ಮತ್ತಿತರರಿದ್ದರು.

    ವಿವಿಧ ಸ್ಪರ್ಧೆ ವಿಜೇತರು: ಜಾನಪದ ಗುಂಪು ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆ ಕಾವ್ಯಶ್ರೀ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಅಯ್ಕೆಗೊಂಡಿತು. ೋಳೂರುಶೆಟ್ಟಳ್ಳಿಯ ಡಾ. ಅಂಬೇಡ್ಕರ್ ಶಾಲೆ ದ್ವಿತೀಯ ಹಾಗೂ ಬಸವನಳ್ಳಿ ಮೊರಾರ್ಜಿ ಶಾಲೆ ತೃತಿಯ ಸ್ಥಾನ ಪಡೆದವು.

    ಜಾನಪದ ನೃತ್ಯ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಅಂಬೇಡ್ಕರ್ ಶಾಲೆಯ ನಿಸ್ಮಿತ ಪ್ರಥಮ, ರೀತು ದ್ವಿತೀಯ ಸ್ಥಾನ ಪಡೆದರು. ಜಾನಪದ ಗೀತೆ ಗುಂಪು ವಿಭಾಗದಲ್ಲಿ ಅಂಬೇಡ್ಕರ್ ವಸತಿ ಶಾಲೆ ಪ್ರಥಮ, ಸೋಮವಾರಪೇಟೆ ಗಾಂಧರ್ವ ಯುವಕ ಸಂಘವು ದ್ವಿತೀಯ ಸ್ಥಾನ ಪಡೆದವು. ವೈಯುಕ್ತಿಕ ವಿಭಾಗದಲ್ಲಿ ಧನುಶ್ರೀ (ಪ್ರ), ಪ್ರಾರ್ಥನಾ (ದ್ವಿ) ಹಾಗೂ ಕಾರ್ತಿಕ್(ತೃ) ಸ್ಥಾನ ಪಡೆದರು. ಕಥೆ ಬರೆಯುವ ಸ್ಪರ್ಧೆಯಲ್ಲಿ ಟಿ.ಎಸ್. ಹರ್ಷವರ್ಧನ್(ಪ್ರ), ಪಿ.ಎಚ್.ಪುಷ್ಪಲತಾ (ದ್ವಿ) ಹಾಗೂ ಎಚ್.ವಿ. ಕಾರ್ತಿಕ್(ತೃ) ಸ್ಥಾನ ಪಡೆದುಕೊಂಡರು.

    ಭಿತ್ತಿಪತ್ರ ತಯಾರಿಕೆ ಸ್ಫರ್ಧೆಯಲ್ಲಿ ಡಿ.ವಿ.ನಿಹಾ ಪ್ರಥಮ ಹಾಗೂ ಎ.ಎಂ.ಸೌರವ್ ದ್ವಿತೀಯ ಸ್ಥಾನ ಪಡೆದುಕೊಂಡರು. ಘೋಷಣೆ ಸ್ಪರ್ಧೆಯಲ್ಲಿ ಸಭನಾ ಪ್ರಥಮ, ಹರ್ಷವರ್ಧನ್ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರು. ತೀರ್ಪುಗಾರರಾಗಿ ಕಾಜೂರು ಸತೀಶ್, ಮಾದಾಪುರದ ಶಂಕರಯ್ಯ, ಮಡಿಕೇರಿಯ ಹರೀಶ್ ಕಾರ್ಯನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts