ಸಿರಗುಪ್ಪ: ಮುಂಗಾರು ವಿಳಂಬ ಹಾಗೂ ಬಿಸಿಲಿನ ಝಳಕ್ಕೆ ತಾಲೂಕಿನಲ್ಲಿ ತೆರೆದ ಬಾವಿಗಳು, ಹಳ್ಳ-ಕೊಳ್ಳಗಳು, ಬೋರ್ವೆಲ್ಗಳು ನೀರಿಲ್ಲದೆ ಬತ್ತಿ ಹೋಗುತ್ತಿವೆ. ಆದರೆ ನಗರದ ಹೊರವಲಯದ ಜಿಗಳಾರ್ತಿ ಬಾವಿಯಲ್ಲಿ ಜೀವಗಂಗೆ ತುಂಬಿರುವುದು ವಿಸ್ಮಯ ಮೂಡಿಸಿದೆ.
ಬಾವಿಯು ವಿಜಯನಗರ ವಾಸ್ತುಶೈಲಿಯನ್ನು ಹೋಲುತ್ತದೆ. ಚೌಕಾಕಾರವಾಗಿದ್ದು, ಬಾವಿಗಿಳಿಯಲು ಮೆಟ್ಟಿಲುಗಳಿವೆ. ನಿರ್ಮಾಣಕ್ಕೆ ಕಪ್ಪುಶಿಲೆ ಬಳಸಲಾಗಿದೆ. ನಕ್ಷತ್ರಾಕಾರದಲ್ಲಿ ನಿರ್ಮಾಣವಾಗಿರುವ ಬಾವಿಯ ಗೋಡೆಯ ಮೇಲೆ ಗಣೇಶ, ನಾಗರಹಾವು, ಮತ್ಸ್ಯ ಮಿಥುನ ಶಿಲ್ಪಗಳನ್ನು ಕೆತ್ತಲಾಗಿದೆ.
ಜಾನುವಾರುಗಳಿಗೀದೆ ನೀರಿನ ಅನುಕೂಲ
ಬಾವಿಯ ಪಕ್ಕದಲ್ಲಿ ಕಲ್ಲಿನ ಗುಂಡಿಯಲ್ಲಿ ಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲವಾಗುವಂತೆ ಕಲ್ಲಿನಲ್ಲಿ ನೀರು ನಿಲ್ಲುವಂತೆ ಮಾಡಲಾಗಿದೆ. ಈ ಹಿಂದೆ ರೈತರಿಗೆ ಮತ್ತು ಜಾನುವಾರುಗಳಿಗೆ ನೀರು ಬಳಕೆ ಮಾಡುತ್ತಿರುವುದನ್ನು ಸೂಚಿಸುತ್ತದೆ. ಇದಕ್ಕೆ ಬತ್ತದ ಬಾವಿ ಎನ್ನುವ ಹೆಸರು ಮೊದಲಿನಿಂದಲೂ ಸಾರ್ವಜನಿಕರಲ್ಲಿ ಜನಜನಿತವಾಗಿದೆ.
ಇದನ್ನೂ ಓದಿ: 45 ಕೆ.ಜಿ. ತೂಕದ ಆಡನ್ನು ನುಂಗಲೆತ್ನಿಸಿದ ಹೆಬ್ಬಾವು
ತಾಲೂಕಿನಲ್ಲಿ ಅತಿ ಹೆಚ್ಚಿನ ಬಿಸಿಲಿನ ಉಷ್ಣಾಂಶ ಹಾಗೂ ಮುಂಗಾರು ವಿಳಂಬದಿಂದ ಅನೇಕ ಕೊಳವೆ ಬಾವಿಗಳು ಬತ್ತಿಹೋಗಿವೆ. ಆದರೆ ಜಿಗಳಾರ್ತಿ ಬಾವಿಯಲ್ಲಿ ಸಮೃದ್ಧ ನೀರಿದ್ದು, 10 ಅಡಿಗೂ ಹೆಚ್ಚಿನ ಆಳದವರೆಗೂ ಗಂಗೆ ನಳನಳಿಸುತ್ತಿದ್ದಾಳೆ. ಪ್ರತಿವರ್ಷ ಈ ಭಾಗದ ರೈತರಿಗೆ ಮತ್ತು ಸಂಚಾರಿ ಕುರಿಗಾಹಿಗಳಿಗೆ, ಕುರಿಗಳಿಗೆ ನೀರೇ ಕುಡಿಯಲು ಆಸರೆಯಾಗಿದೆ.
ಶುದ್ಧ ತಿಳಿಯಾದ ನೀರು ಪಶು-ಪಕ್ಷಿ ಮತ್ತು ಜಾನುವಾರುಗಳ ದಾಹ ತೀರಿಸುತ್ತಿದೆ. ಸದ್ಯ ಬಾವಿಯಲ್ಲಿ ಸಂಗ್ರಹವಾಗಿದ್ದ ಅಲ್ಪಮಟ್ಟದ ಹೂಳನ್ನು ನಾಲ್ಕು ವರ್ಷಗಳ ಹಿಂದೆ ತೆಗೆಯಲಾಗಿತ್ತು. ನೀರಿನ ಸೆಲೆ ಹೆಚ್ಚಾಗಲು ಅನುಕೂಲವಾಗಿದೆ. ಇಲ್ಲಿನ ಜಮೀನುಗಳಲ್ಲಿ ಕಾರ್ಯನಿರ್ವಹಿಸುವ ರೈತರಿಗೂ ಮತ್ತು ಸಾರ್ವಜನಿಕರಿಗೆ ನೀರು ಕುಡಿಯಲು ಅನುಕೂಲವಾಗಿದೆ.
ಪೂರ್ವಕಾಲದಲ್ಲೂ ದೂರದ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ತೆರಳಬೇಕಾಗಿತ್ತು. ಇಲ್ಲಿಯೇ ದಾರಿ ಹೋಕರು ದಾಹ ತೀರಿಸಿಕೊಳ್ಳುತ್ತಿದ್ದರು. ಬಾವಿಯ ಕುರಿತು ಶಿಲಾಶಾಸನಗಳಲ್ಲಿ ಉಲ್ಲೇಖ ಇಲ್ಲದಿದ್ದರೂ ವರ್ಷ ಪೂರ್ತಿ ನೀರು ಇರಲಿದೆ.
ಬಾವಿಯ ಮಹತ್ವ ಕುರಿತು ಪುರಾತತ್ವ ಇಲಾಖೆಯು ಸಂರಕ್ಷಿತ ಸ್ಮಾರಕವಾಗಿ ಘೋಷಿಸಬೇಕು. ಮುಂದಿನ ಪೀಳಿಗೆಗೆ ಮೂಲಕ ಜಲಸಾಕ್ಷರತೆ ಮೂಡಿಸಬೇಕೆಂದು ಇತಿಹಾಸ ಸಂಶೋಧಕ ಎನ್.ರಾಮಕೃಷ್ಣಯ್ಯ ಒತ್ತಾಯಿಸಿದರು.