ಕೊಪ್ಪಳ: ಜೆಡಿಎಸ್ ಪಕ್ಷದ ತತ್ವ, ಸಿದ್ಧಾಂತ ಮೆಚ್ಚಿ ಹಲವರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಡಾ.ಮಹೇಶ ಗೋವನಕೊಪ್ಪ. ರವೀಂದ್ರ ಪಾಟೀಲ್, ಹುಸೇನ್ ಪಾಷಾ ಮೊದಲ ಹಂತದಲ್ಲಿ ಸೇರಿದ್ದಾರೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನ ಪಡೆವ ಗುರಿ ಹೊಂದಿದ್ದು, ಅದಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದೇವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಿಂದೆ ಪಕ್ಷದಲ್ಲಿದ್ದವರನ್ನು ಸಂಪರ್ಕಿಸಿ ಪಕ್ಷಕ್ಕೆ ಕರೆತರುವ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಜಿಲ್ಲೆಯಲ್ಲೂ ಆ ಕೆಲಸ ಮಾಡಲಾಗುತ್ತಿದೆ. ಜೆಡಿಎಸ್ ಬಗ್ಗೆ ಮತದಾರರಿಗೆ ಒಲವಿದ್ದು, ಅನೇಕ ನಾಯಕರು ಸೇರ್ಪಡೆಗೆ ಆಸಕ್ತಿವಹಿಸಿದ್ದಾರೆ. ಅಂಥವರನ್ನು ಬರ ಮಾಡಿಕೊಳ್ಳುತ್ತಿದ್ದೇವೆ. ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಪಕ್ಷ ಸಂಘಟನೆಗಾಗಿ ದುಡಿಯುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ದುರಾಡಳಿತಕ್ಕೆ ಜನರು ರೋಸಿ ಹೋಗಿದ್ದಾರೆ. ಯಾವಾಗ ಇವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಕಾಯುತ್ತಿದ್ದಾರೆಂದು ಎಂದರು.
ಡಾ.ಮಹೇಶ ಗೋವನಕೊಪ್ಪ ಮಾತನಾಡಿ, ಸಮಾಜ ಸೇವೆ ಮಾಡಲು ವೈದ್ಯವೃತ್ತಿಯಿಂದ ರಾಜಕೀಯಕ್ಕೆ ಬಂದಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ತತ್ವ, ಸಿದ್ಧಾಂತಗಳನ್ನು ಜನತೆಗೆ ತಿಳಿಸಿ ಸಂಘಟನೆ ಮಾಡುವೆ ಎಂದರು. ಜೆಡಿಎಸ್ ಮುಖಂಡರಾದ ಮಂಜುನಾಥ, ಚನ್ನಪ್ಪ, ಮಲ್ಲಿಕಾರ್ಜುನ, ರವಿ ಪಾಟೀಲ್ ಇದ್ದರು.