ತುಮಕೂರು: ಗುಬ್ಬಿ ತಾಲೂಕು ಬಿಕ್ಕೆಗುಡ್ಡ ಕುಡಿಯುವ ನೀರು ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ಹಾಗೂ ಗಿಡ-ಮರ ಬೆಳೆಗಳಿಗೆ ಹೆಚ್ಚಿನ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ರೈತರಿಗೆ ಭರವಸೆ ನೀಡಿದರು.
ಬಿಕ್ಕೆಗುಡ್ಡ ಕುಡಿಯುವ ನೀರಿನ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರೊಂದಿಗೆ ಜಿಪಂ ಸಭಾಂಗಣದಲ್ಲಿ ಗುರುವಾರ ಸಭೆ ನಡೆಸಿದ ಅವರು, ಪೈಪ್ಲೈನ್ ಮೂಲಕ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು 6 ಮೀಟರ್ ಅಗಲ ಭೂಮಿ ಮಾತ್ರ ವಶಪಡಿಸಿಕೊಳ್ಳಲಾಗುವುದು ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತೆರೆದ ಕಾಲುವೆ ಮೂಲಕ ನೀರು ಹರಿಸಲು 15 ಮೀ., ಭೂ-ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸಲಾಗಿತ್ತು. ಹಾಗಾಗಿ, ಆರು ಮೀಟರ್ ತೆಗೆದರೂ ಅದರ ಮಣ್ಣು ಸುರಿಯಲು ಅಕ್ಕಪಕ್ಕದಲ್ಲಿಯೂ ಜಮೀನು ಬಳಸುವುದರಿಂದ 15ಮೀಟರ್ಗೆ ಪರಿಹಾರ ಒದಗಿಸಬೇಕು, ಪಪ್ಪಾಯ, ಬಾಳೆಗೂ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿಕೊಂಡರು.
ನೀರು ಹರಿಸುವ ಪೈಪ್ಲೈನ್ ಕಾಮಗಾರಿ ವೇಳೆ ಜಮೀನಿನಲ್ಲಿರುವ ಗಿಡ-ಮರ, ಬೆಳೆಗಳಿಗೆ ಹಾನಿಯುಂಟಾದರೆ ಮಾರ್ಗಸೂಚಿಯನ್ವಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನಿಗದಿಪಡಿಸಿದ ದರದಲ್ಲಿ ಹೆಚ್ಚಿನ ಪರಿಹಾರ ಕೊಡಿಸಲಾಗುವುದು. ಭೂ-ಸ್ವಾಧೀನಕ್ಕೆ ರೈತರು ಸಮ್ಮತಿ ಸೂಚಿಸಿದರೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಇಲ್ಲದಿದ್ದರೆ ಸ್ವಾಧೀನ ಪ್ರಕ್ರಿಯೆಯಂತೆಯೇ ಪರಿಹಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಈ ಪ್ರದೇಶದಲ್ಲಿ ಅಡಕೆ, ತೆಂಗಿನ ತೋಟಗಳು ಸಮೃದ್ಧವಾಗಿವೆ. ನಾನು ಸ್ಥಳ ಪರಿಶೀಲನೆ ಮಾಡಿದ್ದೇನೆ ಯೋಜನೆಯಿಂದ ಬಾಧಿತವಾಗುವ ಗಿಡ-ಮರ ಬೆಳೆಗಳಿಗೆ ಹೆಚ್ಚಿನ ಪರಿಹಾರ ಕಲ್ಪಿಸಲಾಗುವುದು, ಪಪ್ಪಾಯಿ(ಪರಂಗಿ) ಮತ್ತು ಬಾಳೆ ಬೆಳೆಗಳಿಗೂ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಆ ಭಾಗದ ಜನರ ಅನುಕೂಲಕ್ಕಾಗಿ ಈ ಯೋಜನೆ ಕೈಗೊಳ್ಳಲಾಗಿದೆ. ಹಾಗಾಗಿ ರೈತರು ಇದಕ್ಕೆ ಸಮ್ಮತಿ ನೀಡಿ ಎಲ್ಲರೂ ಸಹಮತ ತೋರಬೇಕು ಎಂದು ಸಚಿವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಬಿಕ್ಕೆಗುಡ್ಡ ಪ್ರದೇಶದ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಪಪ್ಪಾಯ ಹಾಗೂ ಬಾಳೆ ಬೆಳೆಗಳಿಗೂ ಸೆಕ್ಷನ್ 2ರಂತೆ ದರ ನಿಗದಿ ಮಾಡಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಘೋಷಿಸಿದರು. ಶಾಸಕ ಎಸ್.ಆರ್.ಶ್ರೀನಿವಾಸ್, ಮಸಾಲ ಜಯರಾಮ್, ರೈತ ಮುಖಂಡ ಗೋವಿಂದರಾಜು ಇದ್ದರು.
ಬಿಕ್ಕೆಗುಡ್ಡ ನೀರಾವರಿ ಯೋಜನೆಯಲ್ಲಿ ಬಳಕೆಯಾಗುವ ರೈತರ ಭೂಮಿ ತುಂಬ ಉತ್ಕೃಷ್ಟವಾಗಿದೆ, ತೆಂಗು ಹಾಗೂ ಅಡಕೆ ತೋಟಗಳನ್ನು ಮಾದರಿಯಾಗಿ ಸಾಕಿದ್ದಾರೆ. ನಾನೇ ಖುದ್ದು ಅಲ್ಲಿಗೆ ಭೇಟಿ ನೀಡಿದ್ದು ತೋಟಗಳು ತುಂಬಾ ಚೆನ್ನಾಗಿವೆ. ನಾನು ರೈತನ ಮಗ ಹಾಗಾಗಿ, ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಯೋಜನೆ ಸಾಕಾರಕ್ಕೆ ರೈತರು ಸಹಕಾರ ನೀಡಬೇಕು.
ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ