More

    ಅರ್ಜಿ ವಿಲೇವಾರಿಗೆ 15 ದಿನ ಗಡುವು

    ಮದ್ದೂರು: ಜನತಾ ದರ್ಶನದಲ್ಲಿ ಸ್ವೀಕೃತವಾಗುವ ಕುಂದುಕೊರತೆ ಅರ್ಜಿಗಳನ್ನು 15 ದಿನದೊಳಗೆ ವಿಲೇವಾರಿ ಮಾಡಬೇಕು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕಿನ ಕೊಪ್ಪ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜನತಾ ದರ್ಶನ ಮತ್ತು ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಂದಾಯ ಇಲಾಖೆಯ ವಿಎ ಹಾಗೂ ಆರ್‌ಐಗಳು ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

    ಸಾರ್ವಜನಿಕರು ತಮ್ಮ ಕುಂದುಕೊರತೆಗೆ ಸಂಬಂಧಿಸಿದಂತೆ ತಮ್ಮ ವ್ಯಾಪ್ತಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಕೆಲಸವಾಗದೆ ಇದ್ದ ಸಂದರ್ಭದಲ್ಲಿ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳನ್ನು ಸಂಪರ್ಕಿಸಿ. ಈ ಹಂತದಲ್ಲೂ ಕೆಲಸವಾಗದಿದ್ದಲ್ಲಿ ನನ್ನ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಹೇಳಿದರು.

    ಕೊಪ್ಪ ಹೋಬಳಿಗೆ ಸಂಬಂಧಿಸಿದಂತೆ 8 ಗ್ರಾಮ ಪಂಚಾಯಿತಿಗಳಿದ್ದು, ಈ ವ್ಯಾಪ್ತಿಯ ಜನರ ಕುಂದುಕೊರತೆಗಳನ್ನು ಪರಿಹರಿಸಲು ಜನತಾ ದರ್ಶನವನ್ನು ಆಯೋಜಿಸಲಾಗಿದೆ. ಕೊಪ್ಪ ಭಾಗದ ಜನರು ಆಧಾರ್ ತಿದ್ದುಪಡಿ ಹಾಗೂ ನೋಂದಣಿಗಾಗಿ ಜಿಲ್ಲಾ ಕೇಂದ್ರಕ್ಕೆ ತೆರಳಬೇಕಿತ್ತು. ಇದನ್ನು ತಪ್ಪಿಸಲು ಕೊಪ್ಪದಲ್ಲಿ ಹೊಸ ಆಧಾರ್ ಕೇಂದ್ರವನ್ನು ತೆರೆಯಲಾಗಿದೆ ಎಂದರು.

    ಕೊಪ್ಪ ಹೋಬಳಿಯಲ್ಲಿ ಪೌತಿ ಖಾತೆ ಆಂದೋಲನ ಸಂಬಂಧ ಮೃತರ ಪಟ್ಟಿ ಸಮೇತ ಮನೆ ಮನೆಗೆ ಭೇಟಿ ನೀಡಿ ವಾರಸುದಾರರಿಂದ 658 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವರಿಗೆ ಪೌತಿ ಖಾತೆ ಮಾಡಿಕೊಡಲಾಗುವುದು ಎಂದರು.

    ರಾಜ್ಯದಲ್ಲಿ ಬರ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಬರದ ಹಿನ್ನೆಲೆಯಲ್ಲಿ ಜನರಿಗೆ ಸ್ಪಂದಿಸಲು ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಸಬ್ಸಿಡಿ, ಸಹಾಯಧನ, ಸಾಮಾಜಿಕ ಪಿಂಚಣಿ ಮೂಲಕ 75 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

    ಬೆಳೆ ವಿಮೆ ಯೋಜನೆಯಡಿ 53,000 ರೈತರು ಹೆಸರು ನೋಂದಾಯಿಸಿಕೊಂಡಿದ್ದು, ಸರ್ಕಾರ ವಿಮಾ ಕಂಪನಿಗೆ 1500 ಕೋಟಿ ರೂ. ಹಾಗೂ ರೈತರ ಕಡೆಯಿಂದ 50 ಕೋಟಿ ರೂ. ಪಾವತಿಯಾಗಿದೆ. ಮಳೆಕೊರತೆ ಹಿನ್ನೆಲೆಯಲ್ಲಿ ಬೆಳೆ ನಾಶವಾಗಿದ್ದು, ಪ್ರತಿ ಎಕರೆಗೆ 9,438 ರೂ.ಗಳಂತೆ ಮದ್ದೂರು ತಾಲೂಕಿನಲ್ಲಿ 103 ಲಕ್ಷ ರೂ. ಹಾಗೂ ರಾಜ್ಯಾದ್ಯಂತ 230 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ವಿವರಿಸಿದರು.

    ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನವೀನ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಆನಂದ್ ಕುಮಾರ್, ಜಂಟಿ ಕೃಷಿ ನಿರ್ದೇಶಕ ಅಶೋಕ್ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್ ಸೇರಿದಂತೆ ಇನ್ನಿತರರಿದ್ದರು.

    ವಿವಿಧ ಸವಲತ್ತುಗಳ ವಿತರಣೆ
    ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ಒಟ್ಟು 119 ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
    ಸಾಮಾಜಿಕ ಭದ್ರತಾ ಯೋಜನೆ ಅಡಿ 100 ಫಲಾನುಭವಿಗಳಿಗೆ ಪಿಂಚಣಿ ಮಾಶಾಸನ ವಿತರಿಸಲಾಯಿತು. ಕಾರ್ಮಿಕ ಇಲಾಖೆಯಿಂದ 6 ಜನ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ನವೀಕರಿಸಿ ಕೊಡಲಾಯಿತು. ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿ 12 ಜನರಿಗೆ ಸಹಾಯ ಧನ ವಿತರಿಸಲಾಯಿತು. ಪಂಚಾಯತ್‌ರಾಜ್ ಇಲಾಖೆಯಿಂದ 8 ಜನರಿಗೆ ಉನ್ನತ ವ್ಯಾಸಂಗ, ಶವಸಂಸ್ಕಾರ, ವೈದ್ಯಕೀಯ ವೆಚ್ಚ, ಅಂಗವಿಕಲರಿಗೆ ಸಹಾಯಧನ ವಿತರಿಸಲಾಯಿತು. ಕಂದಾಯ ಇಲಾಖೆಯಿಂದ 42 ಜನ ಅಂಗವಿಕಲರಿಗೆ ಮಾಸಾಶನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ವಿಧವಾ ವೇತನವನ್ನು ನೀಡಲಾಯಿತು. ಪಶು ಸಂಗೋಪನೆ ಇಲಾಖೆಯಿಂದ ಐವರು ರೈತರಿಗೆ ರಬ್ಬರ್‌ಮ್ಯಾಟ್, ಕೃಷಿ ಇಲಾಖೆಯಿಂದ 30 ಜನ ರೈತರಿಗೆ ಮೇವಿನ ಬೀಜ, ರೇಷ್ಮೆ ಇಲಾಖೆಯಿಂದ ಇಬ್ಬರಿಗೆ ರೇಷ್ಮೆಹುಳು ಸಾಕಣೆ ಮನೆ ಶೆಡ್‌ಗೆ ಸಹಾಯಧನ, 4 ಜನ ಹೆಣ್ಣ ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆಯ ಸುಕನ್ಯಾ ಸಮೃದ್ಧಿ ಪಾಸ್ ಬುಕ್ ವಿತರಿಸಲಾಯಿತು.

    ಗಮನ ಸೆಳೆದ ಪ್ರಾತ್ಯಕ್ಷಿಕೆ
    ಜನತಾ ದರ್ಶನದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಜಾನುವಾರುಗಳಿಗೆ ಬರುವ ರೋಗಗಳು ಮತ್ತು ಅದರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಕುರಿತ ಕರಪತ್ರಗಳನ್ನು ಹಂಚುವ ಜತೆಗೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಅರಿವು ಮೂಡಿಸಲಾಯಿತು. ಆರೋಗ್ಯ ಇಲಾಖೆಯಿಂದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್‌ಗಳನ್ನು ಮಾಡಿಸಿಕೊಡಲಾಯಿತು. ಕೃಷಿ, ತೋಟಗಾರಿಕೆ, ಶಿಶು ಅಭಿವೃದ್ಧಿ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಸಿಗುವ ಸಲವತ್ತುಗಳ ಜನರಿಗೆ ಕರಪತ್ರಗಳನ್ನು ನೀಡಿ ಅರಿವು ಮೂಡಿಸಲಾಯಿತು.

    84 ಅರ್ಜಿಗಳು ಸ್ವೀಕೃತ
    ಕಂದಾಯ ಇಲಾಖೆ -48 ಗ್ರಾಮೀಣ ಅಭಿವೃದ್ಧಿ ಇಲಾಖೆ -09, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-01, ಕೆ.ಎಸ್.ಆರ್.ಟಿ.ಸಿ.-02, ಭೂಸ್ವಾಧೀನ ಇಲಾಖೆ-11, ಆರೋಗ್ಯ ಇಲಾಖೆ -02, ಲೋಕೋಪಯೋಗಿ ಇಲಾಖೆ -05, ಕೆ.ಇ.ಬಿ.-02, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ -01, ಕೃಷಿ ಇಲಾಖೆ -02, ಹಿಂದುಳಿದ ವರ್ಗಗಳ ಇಲಾಖೆ -01 ಅರ್ಜಿಗಳನ್ನು ಸ್ವೀಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts