ಕೊಪ್ಪಳ: ಹೊಸ ಪಕ್ಷವನ್ನು ಎದ್ದು ನಿಲ್ಲಿಸಿ ಜನಾರ್ದನ ರೆಡ್ಡಿ ದೇಶಾದ್ಯಂತ ಸುದ್ದಿಗೆ ಕಾರಣವಾಗಿದ್ದರು. ಚುನಾವಣೆ ಇನ್ನೇನು ಬಾಗಿಲ ಬಳಿ ಇದೆ ಎನ್ನುವಾಗ ಹೊಸ ಪಕ್ಷ ರಚಿಸಿ ಎಲ್ಲರಿಗೂ ಶಾಕ್ ನೀಡಿದ್ದ ರೆಡ್ಡಿ, ಈಗ ಕಾಂಗ್ರೆಸ್ ಮತ ಬುಟ್ಟಿಗೂ ಕೈ ಹಾಕಿದ್ದಾರೆ.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಗೆ ಪ್ರವೇಶ ನಿಷೇಧ ಆಗಿರುವ ಕಾರಣ ಅಲ್ಲಿ ಅವರ ಪತ್ನಿ ನಿನ್ನೆ ಅಧಿಕೃತವಾಗಿ ರಾಜಕೀಯದ ಇನ್ನಿಂಗ್ಸ್ ಆರಂಭಿಸಿದ್ದರು.
ಇದೀಗ ಕಾಂಗ್ರೆಸ್ ಪಕ್ಷದ ಮತ ಬುಟ್ಟಿಗೆ ಕೈ ಹಾಕಿರುವ ಜನಾರ್ದನ ರೆಡ್ಡಿ ಕುರುಬ, ಮುಸ್ಲಿಂ ಸಮುದಾಯದ ಮುಖಂಡರು ಕೆಆರ್ಪಿಪಿಗೆ ಸೇರ್ಪಡೆ ಮಾಡಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಕೆಆರ್ ಪಿಪಿಗೆ ಸೇರ್ಪಡೆಯಾಗಿದ್ದು ಇದು ಕಾಂಗ್ರೆಸ್ನ ಬಲವನ್ನು ಕಡಿಮೆ ಮಾಡಿದೆ.
ಜನಾರ್ದನ ರೆಡ್ಡಿಗೆ ಕಂಬಳಿ ಹಾಕಿ ಕೆಆರ್ಪಿಪಿ ಪಕ್ಷಕ್ಕೆ ಕುರುಬ ಸಮುದಾಯ ಮುಖಂಡರು ಸೇರ್ಪಡೆಯಾಗಿದ್ದಾರೆ. ಕುರುಬ ಸಮುದಾಯದ ಪ್ರಭಾವಿ ಮುಖಂಡ ಹನುಮಂತ ಅರಸನಕೆರೆ ಕೆಆರ್ಪಿಪಿ ಪಕ್ಷಕ್ಕೆ ಸೇರಿದ ವಿಷಯ ಕಾಂಗ್ರೆಸ್ಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ರೆಡ್ಡಿಗೆ ಕಂಬಳಿ ಹೊದಿಸಿ ಪಕ್ಷ ಸೇರಿಕೊಂಡ ಹನಮಂತ ಅರಸನಕೆರೆ ಈಗ ಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ, ಕುರುಬ ಹಾಗೂ ಮುಸ್ಲಿಂ ಸಮುದಾಯದ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡು ಸಿದ್ದರಾಮಯ್ಯ ಬಲಗೈ ಬಂಟನಾಗಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ನಡುಕ ಹುಟ್ಟಿಸಿದ್ದಾರೆ.