ಜಮಖಂಡಿ: ತಾಲೂಕಿನಲ್ಲಿ ಕರೊನಾ ವೈರಸ್ ಸೋಂಕಿತರು ಕಂಡು ಬಂದಿಲ್ಲ. ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ, ಜನದಟ್ಟನೆ ಇರುವ ಸ್ಥಳಗಳಲ್ಲಿ ಸೇರಬೇಡಿ. ಯಾರು ಭಯ ಪಡುವ ಅಗತ್ಯತೆ ಇಲ್ಲ, ಎಚ್ಚರದಿಂದ ಇರಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಎಸ್. ಗಲಗಲಿ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಬುಧವಾರ ತಾಲೂಕು ಆರೋಗ್ಯಾಧಿಕಾರಿಗಳ ತಂಡದಿಂದ ನ್ಯಾಯಾಧೀಶರ, ನ್ಯಾಯವಾದಿಗಳ ಹಾಗೂ ನ್ಯಾಯಾಲಯಕ್ಕಾಗಮಿಸಿದ್ದ ಸಾರ್ವಜನಿಕರ ಕರೊನಾ ವೈರಸ್ ಸೋಂಕು ಪರಿಶೀಲಿಸಿ ಅವರು ಮಾತನಾಡಿದರು. ಜಾನುವಾರು ಸಂತೆ ರದ್ದು
ಪ್ರತಿ ಗುರುವಾರ ಪಟ್ಟಣದ ಎಪಿಎಂಸಿಯಲ್ಲಿ ಜಾನುವಾರು ಸಂತೆ ನಡೆಯುತಿತ್ತು. ಆದರೆ, ಕರೊನಾ ವೈರಸ್ ಭೀತಿಯಿಂದ ಈ ವಾರ ಜಾನುವಾರು ಸಂತೆಯನ್ನು ರದ್ದು ಪಡಿಸಿ, ಎಪಿಎಂಸಿ ಗೇಟ್ ಬಂದ್ ಮಾಡಲಾಗಿದೆ.
ಸೂಚನೆ ಗಾಳಿಗೆ ತೂರಿದ ವ್ಯಾಪಾರಿಗಳು
ಮಂಗಳವಾರ ಪಟ್ಟಣದ ಬೀದಿಬದಿ ಕಲ್ಲಂಗಡಿ ಹಣ್ಣು ಮಾರಾಟ ಮಾಡಬಾರದು ಎಂದು ಪೊಲೀಸ್ ಸಿಬ್ಬಂದಿ ಮಾರಾಟಗಾರರಿಗೆ ತಿಳಿಸಿದ್ದರೂ, ಬುಧವಾರ ಕೆಲ ವ್ಯಾಪಾರಿಗಳು ಕಲ್ಲಂಗಡಿ ಮಾರಾಟ ಮಾಡುವ ಮೂಲಕ ಪೊಲೀಸ್ ಇಲಾಖೆ ಸಿಬ್ಬಂದಿ ನೀಡಿದ ಸೂಚನೆಯನ್ನು ಗಾಳಿಗೆ ತೂರಿದಂತಾಗಿತ್ತು.
ನಿತ್ಯ 2-3 ಲಕ್ಷ ರೂ. ಹಾನಿ
ಪಟ್ಟಣದ ಬಸ್ ನಿಲ್ದಾಣಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಡಿಪೋಗೆ 2-3 ಲಕ್ಷ ರೂ.ನಷ್ಟು ಹಾನಿಯಾಗುತ್ತಿದೆ. ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆಂದು ಬಿಡುತಿದ್ದ ಬಸ್ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಬಸ್ಗಳಲ್ಲಿ ಸೋಂಕು ಹರಡಬಾರದು ಎಂದು ನಿತ್ಯ ಬಸ್ಗಳನ್ನು ಡೆಟಾಲ್, ಫೆನಾಯಿಲ್ ಹಾಗೂ ರಾಸಾಯನಿಕ ಸಿಂಪಡಿಸಿ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಘಟಕ ವ್ಯವಸ್ಥಾಪಕ ಸಂಗಮೇಶ ಮಟೋಳಿ ‘ವಿಜಯವಾಣಿ’ಗೆ ತಿಳಿಸಿದರು.