ಜಾಲಂಧರ್: ಕೋವಿಡ್ 19 ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಮಾ.24ರಿಂದ ದೇಶಾದ್ಯಂತ ಲಾಕ್ಡೌನ್ ಘೋಷಿಸಿದೆ. ಇದು ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು, ಜಾಲಂಧರ್ನಂಥ ನಗರಗಳಲ್ಲಿ ವಾಯುಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಿದೆ. ಜಾಲಂಧರ್ನಲ್ಲಂತೂ ಮರೆತೇ ಹೋಗಿದ್ದ ಪ್ರಕೃತಿಯ ಸೊಬಗನ್ನು ಹಲವು ದಶಕಗಳ ಬಳಿಕ ಕಣ್ತುಂಬಿಕೊಳ್ಳುವ ಅವಕಾಶ ಅಲ್ಲಿನ ಜನರಿಗೆ ಲಭಿಸಿದೆ.
ಏನದು ಅವಕಾಶ? ಜಾಲಂಧರ್ ನಗರ ಮಿತಿಮೀರಿ ಬೆಳೆದು, ವಾಯುಮಾಲಿನ್ಯ ಹೆಚ್ಚಾಗಿತ್ತು. ಇದರಿಂದಾಗಿ ದಶಕದ ಹಿಂದೆ ಸೊಬಗಿನ ನೋಟ ಒದಗಿಸುತ್ತಿದ್ದ ಹಿಮಚ್ಛಾದಿತ ಹಿಮಾಲಯ ಪರ್ವತಶ್ರೇಣಿಯ ದೃಶ್ಯ ಕಾಣುವುದೇ ದುಸ್ತರವಾಗಿತ್ತು.
ಆದರೆ ಈಗ ಲಾಕ್ಡೌನ್ನಿಂದಾಗಿ ವಾಹನಗಳ ಸಂಚಾರ ಕಡಿಮೆಯಾಗಿದೆ. ಕೈಗಾರಿಕೆಗಳು ಸ್ತಬ್ಧವಾಗಿವೆ. ಇದರಿಂದಾಗಿ ವಾಯುಮಾಲಿನ್ಯ ಕೂಡ ಕಡಿಮೆಯಾಗಿದ್ದು, ದಶಕಗಳ ನಂತರ ಹಿಮಚ್ಛಾದಿತ ಹಿಮಾಲಯ ಪರ್ವತಶ್ರೇಣಿಗಳು ದರ್ಶನ ನೀಡಲಾರಂಭಿಸಿವೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನರು ತಮ್ಮ ಮನೆಗಳ ಮಾಡಿನ ಮೇಲೆ ದಿನವೂ ಬಂದು ನಿಲ್ಲುವುದು ಸಾಮಾನ್ಯವಾಗುತ್ತಿದೆ.
ಈ ದೃಶ್ಯ ಇನ್ನು ಕೆಲವು ದಿನಗಳವರೆಗೆ ಮಾತ್ರ ಕಾಣಿಸಲಿದೆ. ಲಾಕ್ಡೌನ್ ಅಂತ್ಯಗೊಂಡ ನಂತರದಲ್ಲಿ ಮತ್ತೊಮ್ಮೆ ಈ ದೃಶ್ಯ ಕಣ್ಮರೆಯಾಗಲಿದೆ ಎಂಬುದು ಸ್ಥಳೀಯರ ಕೊರಗಾಗಿದೆ.
ಲಾಕ್ಡೌನ್ ಯಾವಾಗ ಅಂತ್ಯವಾಗುತ್ತೆ…? 14ಕ್ಕೆ ಮುಗಿಯುತ್ತಾ, ವಿಸ್ತರಣೆ ಆಗುತ್ತಾ…?