ಜಗಳೂರು: ಉದ್ಯೋಗದ ಸೇರಿದಂತೆ ಸರ್ವ ಕ್ಷೇತ್ರಗಳಲ್ಲೂ ಮಹಿಳೆ ಪುರುಷನಿಗೆ ಸರಿಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ ಎಂದು ಜೆಎಂಎಫ್ಸಿ ಹಾಗೂ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಯೂನುಸ್ ಅಥಣಿ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಮಹಿಳಾ ಆಯೋಗ, ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧ್ದಿ ಇಲಾಖೆ, ತಾಲೂಕು ಆರೋಗ್ಯ ಇಲಾಖೆ, ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವಿನ ಮೂಲಕ ಮಹಿಳಾ ಸಬಲೀಕರಣ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಅಗತ್ಯ. ಈ ನಿಟ್ಟಿನಲ್ಲಿ ಪ್ರತಿ ಮಹಿಳೆ ಶಿಕ್ಷಣವಂತಳಾದಾಗ ಮಾತ್ರ ಆರ್ಥಿಕ ಸಬಲೀಕರಣ ಸಾಧಿಸಲು ಸಾಧ್ಯ ಎಂದರು.
ವಕೀಲರ ಸಂಘದ ಅಧ್ಯಕ ಇ. ಓಂಕಾರೇಶ್ವರ ಮಾತನಾಡಿ, ಎಲ್ಲ ವರ್ಗದವರ ಮನೆಗೆ ತೆರಳಿ ಉಚಿತ ಕಾನೂನು ನೆರವು ತರಬೇತಿ ನೀಡಲಾಗುತ್ತಿದೆ ಎಂದರು.
ಸಿಪಿಐ ಶ್ರೀನಿವಾಸ್ರಾವ್ ಮಾತನಾಡಿ, ಭೂಮಿ ಮತ್ತು ಜನ್ಮ ನೀಡಿದ ತಾಯಿ ಋಣ ಎಂದಿಗೂ ಯಾರಿಂದಲೂ ತೀರಿಸಲು ಸಾಧ್ಯವಿಲ್ಲ ಎಂದರು.
ಸಿಡಿಪಿಇಒ ಬೀರೇಂದ್ರಕುಮಾರ್ ಮಾತನಾಡಿ, ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸರ್ಕಾರ ಅನೇಕ ಕಾನೂನು ಜಾರಿಗೆ ತಂದಿದೆ ಎಂದರು.
ಹಿರಿಯ ವಕೀಲ ವೈ. ಹನುಮಂತಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್, ವಕೀಲರಾದ ಆರ್. ಓಬಳೇಶ್, ಕೆ.ವಿ. ರುದ್ರೇಶ್, ಮಹಾಂತೇಶ್, ತಾಪಂ ಎಡಿಎ ವಾಸು, ಅಂಗನವಾಡಿ ಮೇಲ್ವಿಚಾರಕಿ ಶಾಂತಮ್ಮ ಮತ್ತಿತರರಿದ್ದರು.