ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅಬ್ದುಲ್ ಮತೀನ್ ಅಹ್ಮದ್ ತಾಹಾ (29) ಮತ್ತು 30 ವರ್ಷದ ಮುಸ್ಸಾವಿರ್ ಹುಸೇನ್ ಶಝೀಬ್ನನ್ನು ಎನ್ಐಎ ಅಧಿಕಾರಿಗಳು ಏ.12ರಂದು ಕೋಲ್ಕತ್ತಾದಲ್ಲಿ ಬಂಧಿಸಿದ್ದರು. ನಗರದ ವಿಶೇಷ ನ್ಯಾಯಾಲಯಕ್ಕೆ ಶಂಕಿತರನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಸೋಮವಾರದವರೆಗೂ ಕಸ್ಟಡಿಗೆ ಪಡೆದಿದ್ದರು. ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು, ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ಜಕ್ಕೂರು ಲೇಔಟ್ ನವ್ಯಾನಗರದ ಮತ್ತೊಬ್ಬ ಶಂಕಿತ ಮುಝಮೀಲ್ ಶರ್ೀ(31) ಮತ್ತು ಈ ಇಬ್ಬರನ್ನು ಕೋರಮಂಗಲದ ಎನ್ಐಎ ಪ್ರಾದೇಶಿಕ ಕಚೇರಿಯಲ್ಲಿ ಮುಖಾಮುಖಿಯಾಗಿಸಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕೃತ್ಯದ ಹಿಂದೆ ಇರುವ ಸ್ಥಳೀಯ ಮತ್ತು ವಿದೇಶಿ ಬಾಂಬರ್ಗಳಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಶಂಕಿತರು ಯಾವ ಯಾವ ರಾಜ್ಯದಲ್ಲಿ, ಯಾರ ಆಶ್ರಯದಲ್ಲಿ ಅಡಗಿದ್ದಾರೆ? ಬಾಂಬರ್ಗಳಿಗೆ ಎಲ್ಲಿಂದ ಹಣ ಬರುತ್ತಿದೆ ಎಂಬ ಮಾಹಿತಿಯನ್ನು ಕೆದಕಿರುವ ಎನ್ಐಎ ಅಧಿಕಾರಿಗಳು, ವಿದೇಶಿ ಹ್ಯಾಂಡ್ಲರ್ಗಳೊಂದಿಗಿನ ಸಂಪರ್ಕ ಮತ್ತು ಅವರ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಶಂಕಿತರು ವಿಚಾರಣೆ ವೇಳೆ ಬಾಯ್ಬಿಟ್ಟಿರುವ ಮತ್ತು ತಾಂತ್ರಿಕ ಮಾಹಿತಿ ಮೇರೆಗೆ ಕೆಫೆ ಸ್ಫೋಟದಲ್ಲಿ ಕೈ ಜೋಡಿಸಿರುವ ಶಂಕಿತರ ಪತ್ತೆಗೆ ಎನ್ಐಎ ಕಾರ್ಯಾಚರಣೆ ಮುಂದುವರಿಸಿದೆ. ಚೆನ್ನೈನಗರದಲ್ಲಿ ಸ್ಫೋಟಕ ತಯಾರಿಕೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿರುವುದು ಮತ್ತು ಅಲ್ಲಿಯೇ ಸಾಕಷ್ಟು ಕಾಲ ನಕಲಿ ಐಡಿ ಕಾರ್ಡ್ಗಳನ್ನು ಬಳಸಿಕೊಂಡು ನೆಲೆಸಿರುವುದು ಬೆಳಕಿಗೆ ಬಂದಿತ್ತು.
ಎನ್ಐಎ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ಶಂಕಿತರಿಗೆ ಹಣ ಸಹಾಯ ಮಾಡುತ್ತಿದ್ದ ಮೂಲಗಳನ್ನು ಹುಡುಕಾಟ ನಡೆಸಲಾಗುತ್ತಿದೆ. ಐದಾರು ವರ್ಷಗಳಿಂದ ಯಾರ್ಯಾರ ಸಹಾಯ ಮತ್ತು ಆಶ್ರಯವನ್ನು ಪಡೆದು ಶಂಕಿತರು ರಾಮೇಶ್ವರಂ ಕೆೆ ಸ್ಫೋಟ ಎಸಗಿದ್ದರು ಎಂಬುದನ್ನು ಎನ್ಐಎ ಅಧಿಕಾರಿಗಳು ಕೆದಕಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.