ಜಗಳೂರು: ಸಾಲ ಪಡೆದ ಮಹಿಳಾ ಗುಂಪು ಸದಸ್ಯರು ಸಕಾಲಕ್ಕೆ ತೀರಿಸಿ ಸಂಘಗಳ ಪ್ರಗತಿಗೆ ಸಹಕರಿಸುವಂತೆ ಜಿಪಂ ಯೋಜನಾ ನಿರ್ದೇಶಕ ಜಗದೀಶ್ ತಿಳಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ಶುಕ್ರವಾರ ಸಂಜೀವಿನಿ ತಾಲೂಕು ನಿರ್ವಹಣಾ ಘಟಕ, ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಪದಾಧಿಕಾರಿಗಳು, ಎಂಬಿಕೆ, ಎಲ್ ಸಿಆರ್ಪಿಗಳ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದರು.
ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸರ್ಕಾರ ಸಾಕಷ್ಟು ಒತ್ತು ನೀಡಿದೆ. ಸಂಘಗಳಿಗೆ ಬಂದ ಹಣವನ್ನು ಖಾತೆಗಳಲ್ಲಿ ಇಟ್ಟುಕೊಳ್ಳುವಂತಿಲ್ಲ. ಗುಂಪಿನಲ್ಲಿ ಬೇಡಿಕೆ ಇದ್ದವರಿಗೆ ಕೊಡಬೇಕು. ಇಲ್ಲವಾದರೆ ಉಳಿದ ಹಣದ ಬಗ್ಗೆ ಮಾಹಿತಿ ನೀಡಬೇಕು. ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿ ಮಾಡಬೇಕೆಂದು ತಿಳಿಸಿದರು.
ತಾಪಂ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಶಿವಕುಮಾರ್ ಮಾತನಾಡಿ, ಸ್ತ್ರೀಯರ ಏಳಿಗೆಗಾಗಿ ವಿವಿಧ ಯೋಜನೆಯಡಿ ಪ್ರೋತ್ಸಾಹ ಧನ ನೀಡಲೆಂದು ತಾಲೂಕಿನ 21 ಗ್ರಾಪಂಗಳಿಗೆ ಅಗತ್ಯ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಸಂವರ್ಧನ ಸಂಸ್ಥೆ ನಿರ್ದೇಶಕ ಮಂಜುನಾಥ್, ಸಂಘಗಳ ಒಕ್ಕೂಟದ ಯೋಜನಾಧಿಕಾರಿ ಲಕ್ಷ್ಮೀಪತಿಗೌಡ ಇದ್ದರು.