ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ಮಧ್ಯೆ ಪಕ್ಷಗಳ ನಾಯಕರು ಆರೋಪ ಪ್ರತ್ಯರೋಪಗಳಲ್ಲಿ ತೊಡಗಿದ್ದಾರೆ.
ಇನ್ನು ಮುಸ್ಲಿಮರಿಗೆ EWS ಅಡಿ ನೀಡಿದ್ದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವ ಕುರಿತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು ಬಿಜೆಪಿ ವಿರುದ್ಧ ಹರಿಹಾಯ್ದಿದ್ಧಾರೆ.
ಅವಸರವೇ ಅಪಘಾತಕ್ಕೆ ಕಾರಣ
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಶೆಟ್ಟರ್ ಸುಪ್ರೀಂ ಕೋರ್ಟ್ನಲ್ಲಿ ತಡೆಯಾಜ್ಞೆ ಆಗೋದು ವಿರಳ. ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದರೆ ಇದು ಬೇರೆಯದೇ ದಾರಿ ಹಿಡಿದಿದೆ ಸರಿಯಾಗಿ ವಿಚಾರ ಮಾಡಿ ತೀರ್ಮಾನ ತೆಗೆದುಕೊಳ್ಳದೆ ಇದ್ದರೆ ಹೀಗೆ ಆಗೋದು ಅವಸರವೇ ಅಪಘಾತಕ್ಕೆ ಕಾರಣ ಎಂದು ದೂಷಿಸಿದ್ದಾರೆ.
ಮೀಸಲಾತಿ ಪ್ರಮಾಣ 65, 70 ಪ್ರತಿಶತಕ್ಕೆ ಏರಿಸಬೇಕಿತ್ತು ವೋಟ್ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಘೋಷಣೆ ಮಾಡಿದ್ರೆ ಹೀಗೆ ಆಗೋದು ಲಿಂಗಾಯತರು ಮತ್ತು ಮುಸ್ಲಿಮರಿಗೆ ಉತ್ತರ ಕೊಡಲಿ ಎಂದು ಹೇಳಿದ್ದಾರೆ.
ಷಾ ಹೇಳಿಕೆಗೆ ತಿರುಗೇಟು
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ. ಈ ರೀತ ಮಾಡಿದವರು ಬಿಜೆಪಿಯವರು ಎಂದು ಆರೋಪಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ ನಡೆಸಿದ ಎಲ್ಲಾ ಸರ್ವೇಗಳಲ್ಲಿಯೂ ಬಿಜೆಪಿ ಮುಂದಿತ್ತು. ಆದರೆ, ಬಿಜೆಪಿ ಮುಖಂಡರು ನನ್ನನ್ನು ಕಡೆಗಣಿಸಿ ತಳಪಾಯ ಹಾಳು ಮಾಡಿಕೊಂಡಿದ್ದಾರೆ. ಸೆಂಟ್ರಲ್ ಕ್ಷೇತ್ರವನ್ನು ಡಿಸ್ಟರ್ಬ್ ಮಾಡಿದ್ರೆ ಉತ್ತರ ಕರ್ನಾಟಕದ ಭಾಗದಲ್ಲಿ ಡಿಸ್ಟರ್ಬ್ ಆಗುತ್ತದೆ ಶೆಟ್ಟರ್ ಕಡೆಗಣಿಸಿದ್ದಕ್ಕೆ ಬಿಜೆಪಿ ಹಣೆಬರಹ ಈಗ ಗೊತ್ತಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಮುಸ್ಲಿಮರ ಮತ ಬೇಕಿಲ್ಲ: ಕೆ.ಎಸ್. ಈಶ್ವರಪ್ಪ
ಏನು ಅನ್ಯಾಯ ಮಾಡಿದ್ದೇನೆ
ನಾನು ಯಾರಿಗೆ ಏನು ಅನ್ಯಾಯ ಮಾಡಿದ್ದೇನೆ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ತಪ್ಪಾ. ನನಗೆ ಟಿಕೆಟ್ ತಪ್ಪಿಸಲು ಇಂತಹುದೇ ಕಾರಣ ಅಂತಾ ಇದುವರೆಗೂ ಯಾರೂ ಹೇಳಿಲ್ಲ ಎಂದಿದ್ದಾರೆ.
ನನಗೆ ಅಧಿಕಾರದ ಆಸೆ ಇಲ್ಲ, ಕೇವಲ ಶಾಸಕನಾಗಿರಬೇಕು ಅಂದುಕೊಂಡಿದ್ದೆ. ಜನರ ಜೊತೆಗೆ ಇರುವುದು ನನ್ನ ಮಹದಾಸೆ ಹಿಂದಿನ ಬಾಗಿಲ ರಾಜಕಾರಣ ನನಗೆ ಹಿಡಿಸುವುದಿಲ್ಲ ರಾಜ್ಯಪಾಲನಾಗುವುದು, ರಾಜ್ಯಸಭಾ ಸದಸ್ಯನಾಗುವುದು ನನಗೆ ಇಷ್ಟ ಇಲ್ಲ.
ಜನರ ಮಧ್ಯದಲ್ಲಿ ನನಗಾದ ಅನ್ಯಾಯ ಹೇಳಿದಾಗ ಜನರೇ ಅರ್ಥ ಮಾಡಿಕೊಂಡಿದ್ದಾರೆ. ಶೆಟ್ಟರ್ ಗೆ ಅನ್ಯಾಯವಾಗಿರುವ ಬಗ್ಗೆ ಜನರಿಗೆ ಮನವರಿಕೆಯಾಗಿದೆ. ನಾನು ಈ ಕ್ಷೇತ್ರವನ್ನು ರೆಡಿ ಮಾಡಿದ್ದೇನೆ, ಇದು ರೆಡಿ ಫುಡ್ ಎಂದು ಪರೋಕ್ಷವಾಗಿ ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಟ್ಟಿ ಬೆಳೆಸಿದ್ದೇನೆ
ನಾನು ಸಂಘಟನೆ ಮಾಡಿದ್ದಕ್ಕೆ ಬಿಜೆಪಿಗೆ ಶಕ್ತಿ ಬಂದಿದೆ ಜೀರೋ ಇದ್ದಲ್ಲಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಧಾರವಾಡ ಗ್ರಾಮೀಣ, ಕಲಘಟಗಿ, ನವಲಗುಂದದಲ್ಲಿ ಬಿಜೆಪಿ ಯಾಕೆ ಸ್ಟ್ರಾಂಗ್ ಆಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ಕ್ಷೇತ್ರಗಳಲ್ಲಿ ಬಿಜೆಪಿ ಸ್ಟ್ರಾಂಗ್ ಮಾಡಲು ಸಾಕಷ್ಟು ಶ್ರಮಿಸಿದ್ದೇನೆ ಯಾವ ಬಿಜೆಪಿ ನಾಯಕರು ಕರೆ ನೀಡಿದರೂ ಪ್ರಯೋಜನವಾಗಲ್ಲ. ಜನರು ಶೆಟ್ಟರ್ ಗೆಲ್ಲಿಸಬೇಕೆಂದು ನಿರ್ಧಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಲ್ಹಾದ್ ಜೋಶಿ ವಿರುದ್ಧ ವಾಗ್ದಾಳಿ
ಜೋಶಿಯವರಿಗೆ 60 ವರ್ಷ ಆಗಿರುವುದರಿಂದ ಅರಳು ಮರಳಾಗಿರಬಹುದು. ಅವರಿಗೆ ಅಧಿಕಾರದ ಮದ ಏರಿದೆ ಆದ್ದರಿಂದ ಅವರು ಹೀಗೆ ಮಾತನಾಡುತ್ತಿದ್ದಾರೆ. 2024ರ ಚುನಾವಣೆಯಲ್ಲಿ ಜೋಶಿಯವರಿಗೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಬಿ.ಎಲ್. ಸಂತೋಷ್, ಪ್ರಲ್ಹಾದ್ ಜೋಶಿ, ಬೊಮ್ಮಾಯಿಯವರ ಕಪಿಮುಷ್ಟಿಯಲ್ಲಿ ಪಕ್ಷವಿದೆ ತಾವೇ ನಿರ್ಧಾರ ಮಾಡಿ ರಾಷ್ಟ್ರೀಯ ನಾಯಕರಿಂದ ಹೇಳಿಸುತ್ತಿದ್ದಾರೆ. ಕಳೆದ ವರ್ಷ ರಘುಪತಿ ಭಟ್ ಹೆಸರು ಕಟ್ ಮಾಡಿದ್ರು ಗೆಲ್ಲುವ ಅಭ್ಯರ್ಥಿಗಳ ಹೆಸರು ಬಿಡಬೇಡಿ ಅಂತಾ ನಾನು ಗಟ್ಟಿಯಾಗಿ ಹೇಳಿದ್ದೆ.
ಕಳೆದ ಬಾರಿ ಒಗ್ಗಟ್ಟಿನ ನಿರ್ಧಾರವಿತ್ತು, ಇತ್ತೀಚೆಗೆ ಕೆಲವರೇ ಎಲ್ಲಾ ಪಕ್ಷವನ್ನು ಕೈಯಲ್ಲಿ ತೆಗೆದುಕೊಂಡಿದ್ದಾರೆ. ಶೆಟ್ಟರ್ ಪಕ್ಷ ಬಿಟ್ಟಿರುವುದರಿಂದ ಏನಾಗುತ್ತೆ ಅಂತಾ ಚುನಾವಣೆ ಫಲಿತಾಂಶ ಬರಲಿ ಗೊತ್ತಾಗುತ್ತೆ ಎಂದು ಬಿಜೆಪಿ ನಾಯಕರನ್ನು ಎಚ್ಚರಿಸಿದ್ದಾರೆ.