ಲಖನೌ: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಇಂದು ನಡೆಯುತ್ತಿದ್ದು, ಸಚಿವರೂ ಸೇರಿ ಬಿಜೆಪಿಯ ಅನೇಕ ಪ್ರಭಾವಿ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ಜಾಟರ ಪ್ರಾಬಲ್ಯದ ನಾಡಿನ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಯೋಗಿ ಆದಿತ್ಯನಾಥ ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀಕಾಂತ್ ಶರ್ಮಾ (ಮಥುರಾ), ಅತುಲ್ ಗಾರ್ಗ್ (ಗಾಜಿಯಾಬಾದ್), ಕಪಿಲ್ದೇವ್ ಅಗರವಾಲ್ (ಮುಜಫರನಗರ), ಉತ್ತರಾಖಂಡದ ಮಾಜಿ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ (ಆಗ್ರಾ ಗ್ರಾಮೀಣ), ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ಪಂಕಜ್ ಸಿಂಗ್ (ರಾಜನಾಥ್ ಸಿಂಗ್ ಅವರ ಪುತ್ರ) (ನೋಯ್ಡಾ) ಮುಂತಾದವರು ಸ್ಪರ್ಧಿಸುತ್ತಿದ್ದಾರೆ. 4 ಸಲ ಶಾಸಕರಾದ ಕಾಂಗ್ರೆಸ್ ಶಾಸಕ ಪ್ರದೀಪ್ ಮಾಥುರ್, ಎರಡು ಸಲದ ಶಾಸಕ ಪಂಕಜ್ ಮಲಿಕ್ ಕೂಡ ಗಮನಸೆಳೆದಿದ್ದಾರೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಈ 58 ಕ್ಷೇತ್ರಗಳ ಪೈಕಿ 53 ಬಿಜೆಪಿ ಪಾಲಾಗಿದ್ದವು. ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಮತ್ತು ಸಮಾಜವಾದಿ ಪಾರ್ಟಿ (ಎಸ್ಪಿ) ತಲಾ 2 ಸ್ಥಾನಗಳನ್ನು ಗೆದ್ದರೆ, ಆರ್ಎಲ್ಡಿ 1 ಸ್ಥಾನದಲ್ಲಿ ಗೆಲುವು ಕಂಡಿತ್ತು.
ಇಂದು ಮೊದಲ ಹಂತದ ಮತದಾನ
- 58 ವಿಧಾನಸಭಾ ಕ್ಷೇತ್ರ
- 623 ಅಭ್ಯರ್ಥಿಗಳು
- 2.27 ಕೋಟಿ ಮತದಾರರು
ಪ್ರಭಾವಿ ಸಮುದಾಯಗಳು
ಜಾಟರು ಮುಸ್ಲಿಮರು ದಲಿತರು ತ್ರಿಬಲ್ ರೈಡ್ ಮಾಡ್ಬೇಕಾ.. ಗೆಲ್ಲಿಸಿ. ಬೈಕ್ಗಳಲ್ಲಿ ಸಂಚಾರಿ ಪೊಲೀಸರ ಕಾಟವಿಲ್ಲದೆ ತ್ರಿಬಲ್ ರೈಡ್ ಮಾಡಲು ಬಯಸುತ್ತೀರಾ? ಹಾಗಾದ್ರೆ ನಮಗೆ ಮತ ಚಲಾಯಿಸಿ ಗೆಲ್ಲಿಸಿ ಎಂದು ಸುಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿ (ಎಸ್ಬಿಎಸ್ಪಿ) ಮುಖ್ಯಸ್ಥ, ಮಾಜಿ ಸಚಿವ ಓಂ ಪ್ರಕಾಶ್ ರಾಜ್ಭರ್ ಘೋಷಿಸಿದ್ದಾರೆ.
ಗೋವಾಕ್ಕಾಗಿ ರಾಹುಲ್ ಗಾಂಧಿ ಏನು ಮಾಡಿದ್ದಾರೆ? ಪ್ರಿಯಾಂಕಾ ಗಾಂಧಿ ಏನಾದರೂ ಮಾಡಿದ್ದಾರಾ? ಅವರು ಇಲ್ಲಿ ಗೂಂಡಾಗಿರಿ ಮಾಡಿದ್ದಾರೆ. ಹೀಗಾಗಿ ಅವರು ಇಟಲಿಯ ಗೂಂಡಾಗಳು
| ವಿಶ್ವಜಿತ್ ರಾಣೆ ಗೋವಾ ಆರೋಗ್ಯ ಸಚಿವ
ಕಾಂಗ್ರೆಸ್ನಿಂದ ಉನ್ನತಿ ವಿಧಾನ್ ಜನ ಘೋಷಣ ಪತ್ರ
ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ನ ಪ್ರಣಾಳಿಕೆ ‘ಉನ್ನತಿ ವಿಧಾನ್ ಜನ ಘೋಷಣ ಪತ್ರ’ವನ್ನು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಡುಗಡೆ ಮಾಡಿದ್ದು, ಜನರ ಸಲಹೆ ಮೇರೆಗೆ ನಾವು ಪ್ರಣಾಳಿಕೆ ತಯಾರಿಸುವ ವಿಧಾನ ಅನುಸರಿಸಿದ ಕಾರಣ ಉನ್ನತಿ ವಿಧಾನ ಎಂಬುದನ್ನು ಸೇರಿಸಿದೆವು ಎಂದು ಹೇಳಿದರು. ಕೃಷಿಕರ ಸಾಲ ಮನ್ನಾ, ಗೋಧಿ, ಭತ್ತದ ಎಂಎಸ್ಪಿ 2,500 ರೂ. ಕಬ್ಬು 400 ರೂ., ಬಿಡಾಡಿ ಹಸುಗಳ ಕಾಟಕ್ಕೆ ಸಿಲುಕಿದ ಕೃಷಿಕರಿಗೆ 3,000 ರೂಪಾಯಿ ಪರಿಹಾರ, ಸಗಣಿಯನ್ನು ಕಿಲೋಗೆ 2 ರೂಪಾಯಿಯಂತೆ ಖರೀದಿಸುವುದು, ಕೋವಿಡ್ ವಾರಿಯರ್ಗಳು ಮೃತಪಟ್ಟರೆ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ, ಕೋವಿಡ್ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ 25,000 ರೂಪಾಯಿ, 20 ಲಕ್ಷ ಉದ್ಯೋಗ ಸೃಜನೆ (12 ಲಕ್ಷ ಸರ್ಕಾರಿ ಹುದ್ದೆ ಭರ್ತಿ) ಮುಂತಾದ ಅಂಶಗಳು ಪ್ರಣಾಳಿಕೆಯಲ್ಲಿವೆ.
ಬಿಜೆಪಿಗೆ ಸವಾಲು: ಸಮಾಜವಾದಿ ಪಾರ್ಟಿ ಮತ್ತು ಆರ್ಎಲ್ಡಿ ಮೈತ್ರಿಕೂಟ ಬಿಜೆಪಿಗೆ ಸವಾಲೊಡ್ಡಿದ್ದು, ಭಾರತೀಯ ಕಿಸಾನ್ ಯೂನಿಯನ್ ಕೂಡ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ವಿರುದ್ಧವಾಗಿ ಪ್ರಚಾರ ಅಭಿಯಾನ ನಡೆಸುತ್ತಿದೆ. ಇವೆಲ್ಲವೂ ಬಿಜೆಪಿಗೆ ಬಹುದೊಡ್ಡ ಸವಾಲಾಗಿದೆ.
ಉತ್ತರಾಖಂಡದಲ್ಲಿ ಬಿಜೆಪಿ ಪ್ರಣಾಳಿಕೆ: ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ‘ವಿಷನ್ ಡಾಕ್ಯುಮೆಂಟ್ 2022’ ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ಬಿಡುಗಡೆ ಮಾಡಿದರು. ಎಥಿಕ್ಸ್, ಎಕಾನಮಿ, ಇಕಾಲಜಿ ಆಂಡ್ ಎನ್ವಿರಾನ್ವೆುಂಟ್ ಎಂಬ ಮೂರು ಅಂಶಗಳು ಆಧಾರಸ್ತಂಭಗಳಾಗಿವೆ ಎಂದು ಗಡ್ಕರಿ ಹೇಳಿದರು.