ಬೆಂಗಳೂರು: ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿವಾಸದಲ್ಲಿ ಐಟಿ ದಾಳಿ ಮುಕ್ತಾಯವಾಗಿದೆ. ನಗರದ ಮಾನ್ಯತಾ ಟೆಕ್ಪಾರ್ಕ್ನಲ್ಲಿರುವ ನಿವಾಸದಲ್ಲಿ ಕಳೆದ 42 ಗಂಟೆಗಳಿಂದ ನಡೆದ ಪರಿಶೀಲನೆ ಅಂತ್ಯವಾಗಿದೆ.
ಮಹತ್ವದ ದಾಖಲೆಗಳೊಂದಿಗೆ ಪಂಚನಾಮೆ ಕಾರ್ಯ ಪೂರ್ಣಗೊಳಿಸಿ ಐಟಿ ಅಧಿಕಾರಿಗಳು ಹೊರಟಿದ್ದಾರೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಮೆಟ್ರೋ ಕಾರ್ಪ್ ಕಂಪನಿ ಪಾಲುದಾರರಾಗಿರುವ ಅಂಬಿಕಾಪತಿ ಪುತ್ರ ಪ್ರದೀಪ್, ಪ್ರಮೋದ್ಗೆ ಐಟಿಯಿಂದ ನೋಟಿಸ್ ನೀಡಲಾಗಿದೆ.
ಮಾನ್ಯತಾ ಟೆಕ್ ಪಾಕ್೯ ಮನೆಯಲ್ಲಿ ನಡೆಸಿದ ಪರಿಶೀಲನೆ ವೇಳೆ ಎರಡು ಸೂಟ್ ಕೇಸ್ ಗಳು ಪತ್ತೆಯಾಗಿದ್ದು, ಅದರಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ರಗಳು, ನಗದು ಶುಕ್ರವಾರ (ಅ.13) ಪತ್ತೆಯಾಗಿತ್ತು.
ಮತ್ತೊಂದೆಡೆ ಹಣದ ಮೂಲದ ಹುಡುಕಾಟಕ್ಕೆ ಮುಂದಾಗಿರುವ ಐಟಿ ಅಧಿಕಾರಿಗಳು, ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ಅಂಬಿಕಾಪತಿ, ಆತನ ಪುತ್ರ ಸೇರಿ ಸಂಬಂಧಪಟ್ಟ ಎಲ್ಲರಿಗೂ ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯದಲ್ಲಿಯೇ ವಿಚಾರಣೆ ಹಾಜರಾಗಲು ಸೂಚಿಸಿದ್ದಾರೆ.
ಐಟಿ ಅಧಿಕಾರಿಗಳು ಗುರುವಾರ ಚಿನ್ನದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾಗ ಭಾರಿ ಪ್ರಮಾಣದ ನಗದು ಸಂಗ್ರಹವಾಗಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ಆ ಮಾಹಿತಿ ಆಧರಿಸಿ ಅಂಬಿಕಾಪತಿ ನಿವಾಸದ ಮೇಲೆ ದಾಳಿ ಮಾಡಿದ್ದಾಗ ಮಂಚದ ಕೆಳಗೆ ನಗದು ಪತ್ತೆಯಾಗಿತ್ತು.
ಪಂಚರಾಜ್ಯ ಚುನಾವಣೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಈ ಭಾರೀ ಮೊತ್ತದ ಹಣವನ್ನು ಎಲೆಕ್ಷನ್ ಫಡಿಂಗ್ ನೀಡಲು ಸಿದ್ದತೆ ನಡೆದಿತ್ತು ಎಂದು ತಿಳಿದು ಬಂದಿದೆ. ಆದರೆ ಐಟಿ ಅಧಿಕಾರಿಗಳು ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ಮಾಡಿ ದೊಡ್ಡ ಮೊತ್ತದ ಹಣವನ್ನು ವಶಕ್ಕೆ ಪಡೆಯುವ ಮೂಲಕ ಅವರ ಯೋಜನೆಯನ್ನು ತಲೆಕೆಳಗಾಗಿ ಮಾಡಿದ್ದಾರೆ.
ಮೋದಿ ಬರೆದಿರುವ ಗಾರ್ಬೋ ಹಾಡು ಬಿಡುಗಡೆ; ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ ಪ್ರಧಾನಿ