ನವದೆಹಲಿ: ಚಂದ್ರಯಾನ-3 ಮಿಷನ್ ಉಡಾವಣೆ ಸಂದರ್ಭದಲ್ಲಿ ಹಿನ್ನೆಲೆ ಧ್ವನಿ ನೀಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿ ಎನ್. ವಲರಮತಿ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಭಾರತದ ಮೂರನೇ ಚಂದ್ರಯಾನ ಯೋಜನೆ ಚಂದ್ರಯಾನ-3 ವೇಳೆ ರಾಕೆಟ್ ಉಡಾವಣೆ ಸಂದರ್ಭದಲ್ಲಿ ಕೌಂಟ್ಡೌನ್ ಧ್ವನಿ ನೀಡಿದ ವಲರಮತಿ ಅವರು ಮೂಲತಃ ತಮಿಳುನಾಡಿನ ಅರಿಯಲೂರಿನವರು. ಶನಿವಾರ ಸಂಜೆ ಹೃದಯಾಘಾತದಿಂದ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಚಂದ್ರಯಾನ 3 ವೇಳೆ ನೀಡಿದ ಧ್ವನಿ ಅವರ ಕೊನೆಯ ಕೌಂಟ್ಡೌನ್ ಧ್ವನಿಯಾಗಿದೆ.
ವಲರಮತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಇಸ್ರೋದ ಮಾಜಿ ನಿರ್ದೇಶಕ ಡಾ.ಪಿ.ವಿ.ವೆಂಕಟಕೃಷ್ಣನ್, ಶ್ರೀಹರಿಕೋಟಾದಿಂದ ಇಸ್ರೋದ ಮುಂದಿನ ಕಾರ್ಯಾಚರಣೆಗಳ ಕ್ಷಣಗಣನೆಗೆ ವಲರಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3 ಆಕೆಯ ಅಂತಿಮ ಕ್ಷಣಗಣನೆ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ನಿಮಗೆ ಪ್ರಣಾಮಗಳು ಎಂದು ಎಕ್ಷ್ನಲ್ಲಿ ಸಂತಾಪ ಸೂಚಿಸಿದ್ದಾರೆ.
The voice of Valarmathi Madam will not be there for the countdowns of future missions of ISRO from Sriharikotta. Chandrayan 3 was her final countdown announcement. An unexpected demise . Feel so sad.Pranams! pic.twitter.com/T9cMQkLU6J
— Dr. P V Venkitakrishnan (@DrPVVenkitakri1) September 3, 2023
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ವಲರಮತಿ ಅವರು ನಿಧನಕ್ಕೆ ಸಂತಾಪಗಳನ್ನು ಸೂಚಿಸುತ್ತಿದ್ದಾರೆ.
ಅಂದಹಾಗೆ ಚಂದ್ರಯಾನ 3 ಮಿಷನ್ನನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಡಾವಣ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಒಳಗೊಂಡಿದ್ದ ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗೆ ಮಾಡಿತು. ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಮತ್ತು ಚಂದ್ರನಲ್ಲಿಗೆ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಯನ್ನು ಚಂದ್ರಯಾನ-3 ಗಳಿಸಿದೆ. ಚಂದ್ರನ 1 ದಿನ ಭೂಮಿಯ 14ಕ್ಕೆ ಸಮನಾಗಿದ್ದು, 14 ದಿನ ಚಂದ್ರನ ಅಂಗಳದಲ್ಲಿ ಕಾರ್ಯಾಚರಣೆ ನಡೆಸಿದ ಪ್ರಗ್ಯಾನ್ ರೋವರ್ ಇದೀಗ ಸ್ತಬ್ಧವಾಗಿದೆ. ಸೆ. 22ಕ್ಕೆ ಮತ್ತೆ ಕಾರ್ಯಾಚರಣೆ ಆರಂಭಿಸಬಹುದು ಎಂದು ಇಸ್ರೋ ಹೇಳಿದೆ. ಚಂದ್ರನ ಮೇಲೆ ಸಲ್ಫರ್ ಸೇರಿದಂತೆ ಅನೇಕ ಅಂಶಗಳು ಇರುವುದನ್ನು ಪ್ರಗ್ಯಾನ್ ರೋವರ್ ಪತ್ತೆಹಚ್ಚಿದೆ. (ಏಜೆನ್ಸೀಸ್)
ಸೋಫಾ ಸೆಟ್ ಖರೀದಿಗೆ ಉತ್ಸುಕತೆ: ಫರ್ನೀಚರ್ ಎಕ್ಸ್ಪೋಗೆ ಜನರಿಂದ ಉತ್ತಮ ಸ್ಪಂದನೆ, 11ರವರೆಗೆ ಆಯೋಜನೆ
ಕನ್ನಡಿಗ ರಾಹುಲ್ ಫಿಟ್; ಅಧಿಕೃತವಾಗಿ ಪ್ರಕಟಿಸುವ ಮುನ್ನವೇ ವಿಶ್ವಕಪ್ಗೆ ಭಾರತ ತಂಡ ಬಹುತೇಕ ಅಂತಿಮ!