ಹುಬ್ಬಳ್ಳಿ: ವಿಜಯಪುರದ ಜೆಎಸ್ಎಸ್ ಕಾಲೇಜ್ನಲ್ಲಿ ನಡೆದ ಪ್ರಥಮ ದರ್ಜೆ ಸಹಾಯಕ ಹುದ್ದೆಯ ಪರೀಕ್ಷೆಯಲ್ಲಿ ಸಿಕ್ಕ ನಕಲು ಚೀಟಿ, ಅಸಲಿಯತ್ತನ್ನು ತೋರಿಸುತ್ತಿದೆ!
ಫೆ. 28ರಂದು ನಡೆಸಿದ್ದ ಪರೀಕ್ಷೆಯಲ್ಲಿ ಉತ್ತರಗಳಿರುವ ಚೀಟಿ ಸಿಕ್ಕಿರುವುದು, ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದ ಕೀ ಉತ್ತರಗಳಿಗೂ ಸಾಮ್ಯತೆ ಇದೆ. ಸಾಮಾನ್ಯ ಪ್ರಶ್ನೆ ಪತ್ರಿಕೆ (‘ಸಿ’ ವರ್ಷನ್)ಗೆ ಗ್ರುಪ್ ಡಿ ನೌಕರ, ಅಭ್ಯರ್ಥಿಯೊಬ್ಬರಿಗೆ ಕೀ ಉತ್ತರವುಳ್ಳ ಚೀಟಿ ಕೊಟ್ಟಿದ್ದರು. ಅದರಲ್ಲಿ 74 ಉತ್ತರಗಳು ಸರಿ ಇವೆ. 16 ತಪ್ಪು
ಇದ್ದು, 10 ಖಾಲಿ ಜಾಗ ಬಿಡಲಾಗಿದೆ. ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಕೆಪಿಎಸ್ಸಿ
ಸುದ್ದಿಯಲ್ಲಿದೆ. ಇದೀಗ ಮರು ಪರೀಕ್ಷೆ ವೇಳೆ ಸಿಕ್ಕ ನಕಲು ಚೀಟಿಯಲ್ಲಿ 74 ಸರಿ ಉತ್ತರವಿರುವುದು ಹಲವು ಅನುಮಾನ ಹುಟ್ಟು ಹಾಕಿದೆ.
ನಕಲು ಮಾಡುತ್ತಿದ್ದ ಮಲಿಕಷಾ ಕೊರಬು ಎಂಬುವರ ಶೋಧ ಮುಂದುವರಿದಿದೆ. ಕಾಲೇಜ್ನ ಗ್ರುಪ್ ಡಿ ನೌಕರ ಆಯುಬ್ ಮುಜಾವರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಇಷ್ಟು ಉತ್ತರಗಳನ್ನು ಕೊಡುವಷ್ಟು ಗ್ರುಪ್ ಡಿ ನೌಕರ ಬುದ್ಧಿವಂತ ಆಗಿದ್ದರೆ, ಗ್ರುಪ್ ಡಿ ನೌಕರಿ ಕೆಲಸದಲ್ಲಿ ಆತ ಇರುತ್ತಿರಲಿಲ್ಲ. ಹಾಗಾಗಿಯೇ ಬೇರೆಯವರ ಕೈವಾಡ ಇರುವ ಶಂಕೆಯನ್ನು ಬಹಳಷ್ಟು ಅಭ್ಯರ್ಥಿಗಳು ವ್ಯಕ್ತಪಡಿಸುತ್ತಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಒಪ್ಪಿಕೊಳ್ಳದ ಕೆಪಿಎಸ್ಸಿ ಅಧಿಕಾರಿಗಳು, ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಪರೀಕ್ಷಾ ಅಕ್ರಮಕ್ಕೆ ಪ್ರಯತ್ನ ನಡೆದಿದೆ ಎಂದು ಹೇಳಿಕೆ ನೀಡಿ ಕೈ ತೊಳೆದುಕೊಂಡಿದ್ದಾರೆ. ಆದರೆ, ಭವಿಷ್ಯದ ಪ್ರಶ್ನೆ ಇಟ್ಟುಕೊಂಡು ರಾಜ್ಯಾದ್ಯಂತ 2,49,012 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಉದ್ಯೋಗದಾತ ಕೆಪಿಎಸ್ಸಿ ವಿರುದ್ಧ ಇವರೆಲ್ಲ ಈಗ ಕೆಂಡಾಮಂಡಲರಾಗಿದ್ದಾರೆ.
ಮಾಸ್ಟರ್ ಮೈಂಡ್ ಯಾರು?
ಇದರ ಹಿಂದೆ ಮಾಸ್ಟರ್ ಮೈಂಡ್ಗಳೆ ಕೆಲಸ ಮಾಡುತ್ತಿದ್ದಾರೆ. ಕೆಪಿಎಸ್ಸಿ ನಡೆಸುವ ಪ್ರತಿ ಪರೀಕ್ಷೆ ವೇಳೆ ಅಕ್ರಮ ವಾಸನೆ ಮೂಗಿಗೆ ಬಡಿಯುತ್ತಿದೆ. ಆದರೂ ಕ್ರಮವೆಂಬುದು ನೆಪವಾಗುತ್ತಿದೆ. ಮಾಸ್ಟರ್ ಮೈಂಡ್ಗಳ ಮೂಲವನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಬೇಕು ಎಂದು ನೊಂದ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ನಾವೆಲ್ಲ ಪರೀಕ್ಷೆ ಬರೆಯುತ್ತಲೇ ಇದ್ದೇವೆ. ಅಕ್ರಮವಾಗಿ ಪರೀಕ್ಷೆ ಬರೆದವರು ಕೆಪಿಎಸ್ಸಿಯಲ್ಲಿ ಹುದ್ದೆ ಗಿಟ್ಟಿಸಿಕೊಳ್ಳುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಯಾಕೆ ಇಂಥ ಪರೀಕ್ಷೆಗಳನ್ನು ಕೆಪಿಎಸ್ಸಿ ಅಧಿಕಾರಿಗಳು ನಡೆಸಬೇಕು? ರಾಜ್ಯಾದ್ಯಂತ ಮರು ಪರೀಕ್ಷೆ ನಡೆಯಲಿ.
| ಶಂಕರ ಪಲ್ಲಕ್ಕಿ ನೊಂದ ಅಭ್ಯರ್ಥಿ