ತೆಹ್ರಾನ್: ಇರಾನ್ನ ಡ್ರೋನ್ಸ್ ಹಾಗೂ ಕ್ಷಿಪಣಿ ದಾಳಿಗೆ ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತೇವೆ ಎನ್ನುವ ಮೂಲಕ ಪ್ರತೀಕಾರದ ಮಾತುಗಳನ್ನಾಡಿರುವ ಇಸ್ರೇಲ್ಗೆ ಪ್ರತಿಕ್ರಿಯಿಸಿರುವ ಇರಾನ್, ಹಿಂದೆಂದು ಬಳಸಿರದ ಮಾರಕ ಶಸ್ತ್ರಾಸ್ತ್ರಗಳನ್ನು ಬಳಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ.
ಶನಿವಾರ (ಏಪ್ರಿಲ್ 13) ತಡರಾತ್ರಿ ಇರಾನ್, ಇಸ್ರೇಲ್ ಗುರಿಯಾಗಿಸಿಕೊಂಡು 300ಕ್ಕೂ ಅಧಿಕ ಕ್ಷಿಪಣಿಗಳನ್ನು ಉಡಾಯಿಸಿತು. ಈ ದಾಳಿಯ ಕುರಿತು ಸೋಮವಾರ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ, ಇರಾನ್ ದಾಳಿಗೆ ನಾವು ಪ್ರತಿದಾಳಿ ಮಾಡುತ್ತೇವೆ. ಪ್ರಧಾನಿ ಬೆಂಜಮಿನ್ ನೇತುನ್ಯಾಹು ಅವರ ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.
ಇದೇ ಸಂದರ್ಭದಲ್ಲಿ ಇಸ್ರೇಲ್ ಪ್ರತೀಕಾರದ ಮಾತಿಗೆ ಇರಾನ್ ಕೂಡ ಪ್ರತಿಕ್ರಿಯೆ ನೀಡಿದೆ. ಇಸ್ರೇಲ್ನಿಂದ ಯಾವುದೇ ದಾಳಿ ನಡೆದರೂ ಇರಾನ್ ಪ್ರತಿದಾಳಿ ನಡೆಸಲಿದೆ. ಅಷ್ಟೇ ಅಲ್ಲದೇ ಅಗತ್ಯಬಿದ್ದರೆ ಹಿಂದೆಂದು ಬಳಸಿರದ ಮಾರಕ ಶಸ್ತ್ರಾಸ್ತ್ರಗಳನ್ನು ಸಹ ನಾವು ಬಳಸಲಿದ್ದೇವೆ ಎಂದಿದೆ ಮತ್ತು ಪ್ರತಿಕ್ರಿಯಿಸಲು ಕೆಲವೇ ಸೆಕೆಂಡ್ಗಳು ಸಾಕು ಎಂದಿದೆ.
ಇರಾನ್ ದಾಳಿಗೆ ಕಾರಣವೇನು?
ಕಳೆದ ಸೋಮವಾರ ಶಂಕಿತ ಇಸ್ರೇಲಿ ಯುದ್ಧವಿಮಾನಗಳು ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಬಾಂಬ್ ದಾಳಿ ನಡೆಸಿದ ಪ್ರತೀಕಾರವಾಗಿ ಇರಾನ್ನಿಂದ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೂವರು ಹಿರಿಯ ಕಮಾಂಡರ್ಗಳು ಸೇರಿದಂತೆ ಏಳು ಮಿಲಿಟರಿ ಸಲಹೆಗಾರರನ್ನು ಇಸ್ರೇಲ್ ಕೊಂದಿದೆ ಎಂದು ಇರಾನ್ ಆರೋಪ ಮಾಡಿದೆ. ಈ ಘಟನೆಯೇ ಇಸ್ರೇಲ್ ಮೇಲಿನ ದಾಳಿಗೆ ಪ್ರಚೋದನೆಯಾಗಿದೆ ಎನ್ನಲಾಗಿದೆ.
ಇರಾನ್ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ತನ್ನ ಕ್ಯಾಬಿನೆಟ್ ಸಭೆ ಕರೆದರು. ಈ ವೇಳೆ ಅವರು ಇರಾನ್ ವಿರುದ್ಧದ ಪ್ರತೀಕಾರದ ಬಗ್ಗೆ ಚರ್ಚಿಸಲು ತಿಳಿಸಿದರು. ಇದರ ನಡುವೆ ಯುಎಸ್ ಉನ್ನತ ಅಧಿಕಾರಿ ಸ್ಟೀವ್ ಸ್ಕಾಲಿಸ್ ಜತೆ ದೂರವಾಣಿಯಲ್ಲಿ ಮಾತನಾಡಿರುವ ನೆತನ್ಯಾಹು, ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಆದರೆ, ಈ ಸಂಘರ್ಷವನ್ನು ಇನ್ನಷ್ಟು ಉಲ್ಬಣಗೊಳಿಸದಂತೆ ಇಸ್ರೇಲ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಒತ್ತಡವಿದೆ. ವಿಶಾಲ ರಾಜತಾಂತ್ರಿಕ ಸಂಬಂಧವನ್ನು ಬೆಳೆಸಲು ಬಯಸುತ್ತಿರುವ ಇಸ್ರೇಲ್ ಈ ಸಂದರ್ಭದಲ್ಲಿ ಕೊಂಚ ಸಂಯಮ ತೋರಿಸಬೇಕೆಂದು ಯುಎಸ್ ಸೇರಿದಂತೆ ಹಲವಾರು ದೇಶಗಳು ಒತ್ತಾಯಿಸಿವೆ. ನಾವು ಇರಾನ್ನೊಂದಿಗೆ ಯುದ್ಧ ಹಾಗೂ ಪ್ರಾದೇಶಿಕ ಸಂಘರ್ಷವನ್ನು ನೋಡಲು ಬಯಸುವುದಿಲ್ಲ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಹೀಗಾಗಿ ಇಸ್ರೇಲ್ ಏನು ಮಾಡಬೇಕೆಂಬ ಚಿಂತೆಯಲ್ಲಿ ಮುಳುಗಿದೆ. (ಏಜೆನ್ಸೀಸ್)
ಟ್ರಾವಿಸ್ ಹೆಡ್ ವಿನೂತನ ಶತಕ ಆಚರಣೆಯ ಹಿಂದಿರುವ ಅರ್ಥ ಗೊತ್ತಾ? ಆರ್ಸಿಬಿ ವಿರುದ್ಧದ ಸೇಡಿಗಿದೆ ಲಿಂಕ್!
ಬಾಲಿವುಡ್ ಬ್ಯೂಟಿ ಮಲೈಕಾರ ಖಾಸಗಿ ಕ್ಷಣದ ವಿಡಿಯೋ ಸೆರೆ! ನಿಮಗೆ ನಾಚಿಕೆ ಆಗಲ್ವಾ ಅಂದ್ರು ನೆಟ್ಟಿಗರು
ಅಯ್ಯೋ ದುರ್ವಿಧಿಯೇ! ಅಯೋಧ್ಯೆಯಲ್ಲಿ ಬೈಕ್ಗೆ ನೀಲಗಾಯ್ ಡಿಕ್ಕಿ, ಸವಾರನ ಎದೆ ಸೀಳಿದ ಕೊಂಬು, ದುರಂತ ಸಾವು