More

    ಸಿಎಸ್​ಕೆ ಗೆದ್ದರೂ ಧೋನಿ ಕಾಲೆಳೆದ ಅಭಿಮಾನಿಗಳು: ರುತುರಾಜ್​ ಅರ್ಧಶತಕ, ಧೋನಿಗೆ ಮುಖಭಂಗ!

    ದುಬೈ: ಇಂದು (ಅ.25) ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಇದರ ಬೆನ್ನಲ್ಲೇ ಸಿಎಸ್​ಕೆ ಕ್ಯಾಪ್ಟನ್​ ಎಂ.ಎಸ್​. ಧೋನಿ ಅವರನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ. ಅದಕ್ಕೆ ಕಾರಣ ಧೋನಿ ಅವರು ಈ ಹಿಂದೆ ನೀಡಿದ್ದ ಒಂದು ಹೇಳಿಕೆ.

    ಈ ಹಿಂದೆ ರಾಜಸ್ಥಾನ ವಿರುದ್ಧ ಸಿಎಸ್​ಕೆ ಹೀನಾಯ ಸೋಲು ಕಂಡಿತ್ತು. ಪಂದ್ಯದ ಬೆನ್ನಲ್ಲೇ ಮಾತನಾಡಿದ್ದ ಧೋನಿ, ಈ ಸೀಸನ್​ನಲ್ಲಿ ಕೆಲ ಯುವ ಕ್ರಿಕೆಟಿಗರಲ್ಲಿ ನಾವು ತುಡಿತ ಕಾಣಲಿಲ್ಲ. ಅವರ ಆಟದಲ್ಲಿ ಯಾವುದೇ ಸ್ಪಾರ್ಕ್ ಇರಲಿಲ್ಲ ಎಂದು ಯುವ ಕ್ರಿಕೆಟಿಗರನ್ನು ಅಣುಕಿಸಿದ್ದರು.

    ಧೋನಿಯ ಮಾತನ್ನು ನೆನಪಿನಲ್ಲಿಟ್ಟುಕೊಂಡಿದ್ದ ಅಭಿಮಾನಿಗಳು ಇಂದು ಆರ್​ಸಿಬಿ ವಿರುದ್ಧ ಪಂದ್ಯ ಗೆಲ್ಲುತ್ತಲೇ ಟ್ರೋಲ್​ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಯುವ ಕ್ರಿಕೆಟಿಗ ರುತುರಾಜ್​ ಗಾಯ್ಕ್​ವಾಡ್​ ಅದ್ಭುತ ಬ್ಯಾಟಿಂಗ್​ ಮಾಡಿದರು. ಕೇವಲ 51 ಎಸೆತದಲ್ಲಿ 3 ಸಿಕ್ಸರ್​, 4 ಬೌಂಡರಿ ನೆರವಿನಿಂದ ಅಜೇಯ 65 ರನ್​ ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, ಯುವಕರಲ್ಲಿ ಕ್ರಿಕೆಟ್​ ಸ್ಪಾರ್ಕ್​ ಇದೆ ಎಂಬುದನ್ನು ನಿರೂಪಿಸಿದರು. ವಿಶೇಷವೆಂದರೆ ರುತುರಾಜ್​ ಅವರಿಗೆ ಐಪಿಎಲ್​ನ ಮೊದಲನೇ ಅರ್ಧಶತಕ ಇದಾಗಿದೆ.

    ಪಂದ್ಯದ ಬೆನ್ನಲ್ಲೇ ವಿವಿಧ ಮೀಮ್ಸ್​ಗಳನ್ನು ಹರಿಬಿಟ್ಟು ಅಭಿಮಾನಿಗಳು ಧೋನಿ ಕಾಲೆಳೆದಿದ್ದಾರೆ. ಇದು ಸ್ಪಾರ್ಕ್​ ಅಂದ್ರೆ ಎಂದು ಧೋನಿಯನ್ನು ಕಿಚಾಯಿಸಿದ್ದಾರೆ. ಯುವ ಕ್ರಿಕೆಟಿಗರಿಗೆ ಅವಕಾಶ ನೀಡಬೇಕೆಂಬುದನ್ನು ರುತುರಾಜ್​ ನಿರೂಪಿಸಿಬಿಟ್ಟರು. ಸ್ಪಾರ್ಕ್​ ಏನೆಂಬುದನ್ನು ರುತುರಾಜ್​, ಧೋನಿಗೆ ತೋರಿಸಿಕೊಟ್ಟರು. ಇನ್ನಾದರೂ ಯುವಕರಿಗೆ ಅವಕಾಶ ನೀಡಿ ಅವಮಾನದಿಂದ ಪಾರಾಗಿ ಎಂದು ಹಿಗ್ಗಾಮುಗ್ಗಾ ಧೋನಿಯನ್ನು ಅಭಿಮಾನಿಗಳು ಟ್ರೋಲ್​ ಮಾಡಿದ್ದಾರೆ. ಅಚ್ಚರಿಯೆಂದರೆ ಸ್ಪಾರ್ಕ್​ (Spark) ಎಂಬ ಪದ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿ ಮಾಡಿದೆ. ಯುವ ಕ್ರಿಕೆಟಿಗರ ಬಗ್ಗೆ ಕಮೆಂಟ್​ ಮಾಡಿದ ಧೋನಿಗೆ ಇದೀಗ ಮುಖಭಂಗ ಅನುಭವಿಸುವಂತಾಗಿದೆ.

    ಈ ಮೊದಲು ಧೋನಿ ಹೇಳಿಕೆಗೆ ಅಭಿಮಾನಿಗಳು ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿ, ಧೋನಿ ಹೇಳಿಕೆಯಿಂದ ನಿಜಕ್ಕೂ ಬೇಸರವಾಗಿದೆ. ಯುವಕರಿಗೆ ಅವಕಾಶವನ್ನು ನೀಡದೆ ಅವರಲ್ಲಿ ಯಾವುದೇ ತುಡಿತವಿಲ್ಲ ಎನ್ನುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನಿಸಿದ್ದರು. ಜಡೇಜಾ ರನ್​ ಕದಿಯುವಲ್ಲಿ ತುಂಬಾ ಕಷ್ಟಪಡುತ್ತಿದ್ದಾರೆ. ಜಾಧವ್​ ಈ ಸೀಸನ್​ನಲ್ಲಿ ನಿರಂತರ ವೈಫಲ್ಯ ಅನುಭವಿಸುತ್ತಿದ್ದಾರೆ. ಆದರೆ, ಇವರಿಗೆ ಮತ್ತೆ ಮತ್ತೆ ಅವಕಾಶ ನೀಡಲಾಗುತ್ತಿದೆ. ಇಂತವರನ್ನು ಪಕ್ಕಕ್ಕೆ ಇಟ್ಟು ಯುವಕರಿಗೆ ಅವಕಾಶ ಕೊಟ್ಟು ನೋಡಿ. ಆ ಬಳಿಕ ಯುವಕರಲ್ಲಿ ಸ್ಪಾರ್ಕ್​ ಇದೆಯೋ? ಇಲ್ಲವೋ ನೋಡಿ ಎಂದು ಅಭಿಮಾನಿಗಳು ಕಿಡಿಕಾರಿದ್ದರು.

    ಟೀಮ್​ ಇಂಡಿಯಾದ ಮಾಜಿ ನಾಯಕ ಕ್ರಿಸ್​ ಶ್ರೀಕಾಂತ್​ ಸಹ ಆಕ್ರೋಶ ಹೊರಹಾಕಿದ್ದರು. ಧೋನಿ ಓರ್ವ ಅತ್ಯುತ್ತಮ ಕ್ರಿಕೆಟಿಗ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ, ರಾಜಸ್ಥಾನ ರಾಯಲ್ಸ್​ ವಿರುದ್ಧ ಸೋತ ಬಳಿಕ ಆಡಿದ ಮಾತುಗಳನ್ನು ಒಪ್ಪಲಾಗದು. ಕೇದರ್​ ಜಾಧವ್​ ನಿರಂತರ ವೈಫಲ್ಯ ಕಾಣುತ್ತಿದ್ದಾರೆ. 8 ಪಂದ್ಯಗಳಿಂದ ಕೇವಲ 62 ರನ್​ಗಳನ್ನು ಮಾತ್ರ ಗಳಿಸಿದ್ದಾರೆ. 24 ವರ್ಷದ ಎನ್​ ಜಗದೀಶನ್​ಗೆ ಆರ್​ಸಿಬಿ ವಿರುದ್ಧ ಒಂದು ಅವಕಾಶ ನೀಡಲಾಯಿತು. ಮೊದಲ ಪಂದ್ಯದಲ್ಲೇ 28 ಎಸೆತದಲ್ಲಿ 33 ರನ್​ ಗಳಿಸಿದ್ದರು. ಅವರಿಗೆ ಈ ಪಂದ್ಯದಲ್ಲೂ ಅವಕಾಶ ನೀಡಬಹುದಾಗಿತ್ತು. ಯುವಕರಲ್ಲಿ ತುಡಿತ ಇಲ್ಲ ಎನ್ನುತ್ತೀರಿ, ಹಾಗಾದರೆ ಜಾಧವ್​ರಲ್ಲಿ ತುಡಿತವಿದೆಯೇ? ಪಿಯುಷ್​ ಚಾವ್ಲಾರಲ್ಲಿ ಇದೆಯಾ? ಧೋನಿ ಮಾತು ಇದೆಲ್ಲ ಹಾಸ್ಯಸ್ಪದವಾಗಿದ್ದು, ಅವರು ನೀಡಿದ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈಗಲಾದರೂ ಯುವಕರಿಗೆ ಅವಕಾಶ ನೀಡಿ ಎಂದಿದ್ದರು.

    ಪಂದ್ಯದ ವಿಚಾರಕ್ಕೆ ಬಂದರೆ ಇಂದಿನ ಪಂದ್ಯದಲ್ಲಿ ಆರ್​ಸಿಬಿ ನೀಡಿದ್ದ 146ರನ್​ ಗುರಿ ಬೆನ್ನತ್ತಿದ ಸಿಎಸ್​ಕೆ ರುತುರಾಜ್​ ಗಾಯ್ಕ್​ವಾಡ್​ (65), ಅಂಬಾಟಿ ರಾಯುಡು (39), ಫಾಫ್​ ಡುಪ್ಲೆಸಿಸ್​ (25) ಮತ್ತು ನಾಯಕ ಎಂ ಎಸ್​ ಧೋನಿ (19*) ಅಮೋಘ ಬ್ಯಾಟಿಂಗ್​ ನೆರವಿನಿಂದ 18.4 ಓವರ್​ನಲ್ಲಿ 2 ವಿಕೆಟ್​ ನಷ್ಟಕ್ಕೆ 150 ರನ್ ಕಲೆ ಹಾಕುವ ಮೂಲಕ ಗೆಲುವಿನ ನಗೆಬೀರಿದೆ. (ಏಜೆನ್ಸೀಸ್​)

    ಆರ್​ಸಿಬಿ ವಿರುದ್ಧ ಗೆದ್ದು ಬೀಗಿದ ಸಿಎಸ್​ಕೆ: ವಿರಾಟ್​ ಪಡೆಯ ಹ್ಯಾಟ್ರಿಕ್​ ಕನಸು ಭಗ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts