More

    ರಾಜಧಾನಿಯಲ್ಲಿ 2.86 ಲಕ್ಷ ನಲ್ಲಿಗಳಿಗೆ ಏರಿಯೇಟರ್​ ಅಳವಡಿಕೆ; ಬೆಂಗಳೂರು ಜಲಮಂಡಳಿ ಮಾಹಿತಿ

    ಬೆಂಗಳೂರು: ಏರಿಯೇಟರ್​ ಅಳವಡಿಕೆ ಕಡ್ಡಾಯಗೊಳಿಸಿದ ಬಳಿಕ ಸುಮಾರು 2,86,114 ನಲ್ಲಿಗಳಿಗೆ ಏರಿಯೇಟರ್​ ಅಳವಡಿಸಲಾಗಿದೆ. ಅಧಿಕಾರಿಗಳು ಪ್ರತಿ ತಿಂಗಳೂ 10 ಲಕ್ಕೂ ಹೆಚ್ಚು ಲೀ. ನೀರು ಬಳಕೆ ಮಾಡುತ್ತಿರುವ 714 ಬಲ್ಕ್​ ಗ್ರಾಹಕರ ಸಮೀಕ್ಷೆ ನಡೆಸಿದ್ದಾರೆ. ಇವರುಗಳಿಂದ ಮಾಹಿತಿ ಸಂಗ್ರಹಿಸಿದ್ದು, 481 ಬಲ್ಕ್​ ಗ್ರಾಹಕರು ಈಗಾಗಲೇ ತಮ್ಮ ವ್ಯಾಪ್ತಿಯಲ್ಲಿ ಏರಿಯೇಟರ್​ ಅಳವಡಿಸಿಕೊಂಡಿದ್ದಾರೆ. ಏರಿಯೇಟರ್​ ಅಳವಡಿಸಿಕೊಂಡಿರುವ ಬಗ್ಗೆ ಸರಿಯಾದ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ಮಾಹಿತಿ ನೀಡಿದ್ದಾರೆ.

    ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹೆಚ್ಚಿನ ಪ್ರಮಾಣದ ಜನಸಂಖ್ಯೆ ಇರುವ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್​ ಅಳವಡಿಸುವ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚಿಸಿದರು.

    ಸಂಸ್ಕರಿಸಿದ ನೀರಿನ ಬೇಡಿಕೆ ಪೂರೈಸುವತ್ತ ಗಮನ ಹರಿಸಿ:

    10 ಲಕ್ಷ ಲೀಟರ್​ಗೂ ಹೆಚ್ಚು ನೀರು ಬಳಕೆದಾರಲ್ಲಿ 127 ಬಲ್ಕ್‌ ಬಳಕೆದಾರರು ಸಂಸ್ಕರಿಸಿದ ನೀರಿನ ಅವಶ್ಯಕತೆ ಇರುವುದನ್ನ ತಿಳಿಸಿದ್ದಾರೆ. ಇವರಿಗೆ ಅವರ ಪ್ರದೇಶಗಳಿಗೆ ಸಮೀಪದ ಜಲಮಂಡಳಿ ಎಸ್‌ಟಿಪಿಗಳು ಹಾಗೂ ಖಾಸಗಿ ಎಸ್‌ ಟಿ ಪಿಗಳಿಂದ ಸಂಸ್ಕರಿಸಿದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಸಂಸ್ಕರಿಸಿದ ನೀರು ಬಳಕೆಯನ್ನು ಹೆಚ್ಚಿಸುವುದು ಹಾಗೂ ಕಾವೇರಿ ನೀರಿನ ಉಳಿತಾಯವನ್ನು ಮಾಡುವುದರಿಂದ ಮಂಡಳಿಯ ನೀರಿನ ಸರಬರಾಜಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

    ಸಂಸ್ಕರಿಸಿದ ನೀರು ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ನೀಡುವ ಉದ್ದಿಮೆಗಳು ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಸಂಸ್ಕರಿಸಿದ ನೀರಿನ ದರದಲ್ಲಿ ಇನ್ನಷ್ಟು ರಿಯಾಯಿತಿ ನೀಡಬಹುದಾಗಿದೆ. ಈ ಬಗ್ಗೆ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

    ಕಾವೇರಿ ನೀರಿನ ಮೇಲಿನ ಒತ್ತಡ ನಿಯಂತ್ರಣಕ್ಕೆ ಸಂಸ್ಕರಿಸಿದ ನೀರಿನ ಬಳಕೆಯೇ ಕ್ರಮ:

    ಕಾವೇರಿ ನೀರಿನ ಮೇಲಿನ ಒತ್ತಡ ಕಡಿಮೆ ಮಾಡುವುದು ಹಾಗೂ ಜಲಮಂಡಳಿಗೆ ಇನ್ನಷ್ಟು ಆದಾಯ ತಂದು ಕೊಡುವಲ್ಲಿ ಸಂಸ್ಕರಿಸಿದ ನೀರು ಬಹಳ ಪ್ರಮುಖ ಪಾತ್ರವನ್ನು ವಹಿಸಲಿದೆ. ಪ್ರತಿ ದಿನ ಜಲಮಂಡಳಿಯ ವತಿಯಿಂದ 1200 ಎಂ.ಎಲ್.ಡಿ ಅಷ್ಟು ಸಂಸ್ಕರಿಸಿದ ನೀರು ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಬಹಳಷ್ಟು ಪಾಲು ನೀರನ್ನ ಬೆಂಗಳೂರು ನಗರದಲ್ಲಿ ಉಪಯೋಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇನ್ನಷ್ಟು ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ವಾಣಿಜ್ಯ ಉದ್ದೇಶಗಳಿಗಾಗಿ, ಕೈಗಾರಿಕೆಗಳ ಬಳಕೆಗಾಗಿ ಹಾಗೂ ಸ್ವಚ್ಚತೆಗಾಗಿ ಸಂಸ್ಕರಿಸಿದ ನೀರನ್ನು ಬಳಸುವ ನಿಟ್ಟಿನಲ್ಲಿ ಜನಾಂದೋಲನ ಪ್ರಾರಂಭಿಸಬೇಕಾದ ಅವಶ್ಯಕತೆಯಿದೆ. ಜನರಲ್ಲಿ ಸಂಸ್ಕರಿಸಿದ ನೀರಿನ ಬಳಕೆಯ ಬಗ್ಗೆ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts