ಹಿರಿಯೂರು: ಜಿಲ್ಲೆಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ರೋಟರಿ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗ, ಬಡ ಜನರಿದ್ದು, ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ಸಿಬ್ಬಂದಿ ನೇಮಕ, ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಅನುದಾನ ನೀಡಲಾಗುವುದು ಎಂದರು.
ಆರೋಗ್ಯ ಸೇವೆ ಎಂಬುದು ಪ್ರತಿಯೊಬ್ಬರಿಗೂ ಸಿಗಬೇಕಾದ ಅಗತ್ಯ ಸೇವೆಯಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಗೌರವಿಸಬೇಕು.
ಮಾನವೀಯತೆಯೊಂದಿಗೆ ಮೌಲ್ಯಾಧಾರಿತ ಸೇವೆ ಒದಗಿಸುವತ್ತ ಗಮನ ಹರಿಸಬೇಕು ಎಂದು ಸೂಚಿಸಿದರು.
ಆದಿವಾಲ ಗ್ರಾಮದ ಸಮೀಪ 25 ಕೋಟಿ ರೂ, ವೆಚ್ಚದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇದ ತಾಲೂಕಿನ ಜನರಿಗೆ ಸಂಜೀವಿನಿಯಾಗಲಿದೆ ಎಂದು ತಿಳಿಸಿದರು.
ಕರೊನಾ ಸಂಕಷ್ಟದ ಸಮಯದಲ್ಲಿ ಜೀವ ಪಣಕ್ಕಿಟ್ಟು ರೋಗಿಗಳ ಜೀವ ಉಳಿಸಲು ಶ್ರಮಿಸಿದ ವೈದ್ಯಕೀಯ ಸಿಬ್ಬಂದಿ ಸೇವೆಗೆ ಬೆಲೆ ಕಟ್ಟಲಾಗದು, ಪ್ರತಿಯೊಬ್ಬರು ವೈದ್ಯರನ್ನು ಗೌರವಿಸಿ, ವಿಶ್ವಾಸದೊಂದಿಗೆ ಕಾಣಬೇಕು ಎಂದು ಹೇಳಿದರು.
ಕೀಲು, ಮೂಳೆ ಹಾಗೂ ಹೃದಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ 526 ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು. 18 ಮಂದಿ ಕೀಲು ಮೂಳೆ ಜೋಡಣೆಗೆ ಹಾಗೂ 11 ಮಂದಿ ಹೃದಯ ಚಿಕಿತ್ಸೆಗೆ ಆಯ್ಕೆಯಾಗಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ವೈದ್ಯರಾದ ಡಾ.ಎಚ್.ಎಲ್.ಸುಬ್ಬರಾವ್, ಡಾ.ಹರೀಶ್ ಪುರಾಣಿಕ್, ಬಿಇಒ ನಾಗಭೂಷಣ್,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜಿಪಂ ಮಾಜಿ ಸದಸ್ಯ ಆರ್.ನಾಗೇಂದ್ರ ನಾಯ್ಕ, ವಕೀಲ ಸಂಘದ ಅಧ್ಯಕ್ಷ ಅನಿಲ್ಕುಮಾರ್,
ನಗರಸಭೆ ಸದಸ್ಯರಾದ ಮಮತಾ, ಶಿವರಂಜಿನಿ, ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಮುಖಂಡರಾದ ಪಿ.ಎಸ್. ಸಾದತ್ಉಲ್ಲಾ, ಜಿ.ದಾದಾಪೀರ್, ಮಹಂತೇಶ್, ವಿನಯ್ಕುಮಾರ್ ಇತರರಿದ್ದರು.
ಜಿಪಂ, ಜಿಲ್ಲಾ-ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಪಂ, ನಗರ ಸಭೆ, ಸಿಟಿ ಸೆಂಟ್ರಲ್ ಹಾಸ್ಪಿಟಲ್ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಂಬುಲೆನ್ಸ್ ಓಡಿಸಿದ ಸಚಿವ: ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದ ಸಚಿವ ಸುಧಾಕರ್, ಸಂಚಾರಿ ಆರೋಗ್ಯ ಘಟಕದ ವಾಹನ ಚಲಾಯಿಸಿ ಗಮನ ಸೆಳೆದರು. ತಪಾಸಣೆಗೆ ಒಳಪಟ್ಟ ಎಲ್ಲರಿಗೂ ಸಚಿವರು ವೈಯಕ್ತಿಕವಾಗಿ ಔಷಧ ವಿತರಣೆ ಮಾಡಿದರು.