ಗಂಗೊಳ್ಳಿ: ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ನಾಯಕವಾಡಿ-ಮುಳ್ಳಿಕಟ್ಟೆ ಮುಖ್ಯರಸ್ತೆಯಲ್ಲಿ ಭಾರಿ ಗಾತ್ರದ ಮರವೊಂದು ರಸ್ತೆ ಮೇಲೆ ಉರುಳಿ ಬೀಳುವ ಸ್ಥಿತಿಯಲ್ಲಿದ್ದು, ಅಪಾಯ ಆಹ್ವಾನಿಸುತ್ತಿದೆ.
ನಾಯಕವಾಡಿ-ಮುಳ್ಳಿಕಟ್ಟೆ ಮುಖ್ಯರಸ್ತೆಯಲ್ಲಿನ ಐಸ್ಪ್ಲಾಂಟ್ ಸಮೀಪ ಭಾರಿ ಗಾತ್ರದ ಮರವೊಂದು ರಸ್ತೆಗೆ ವಾಲಿಕೊಂಡ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲಾದರೂ ಬುಡ ಸಮೇತ ಉರುಳಿ ಬೀಳುವ ಸಾಧ್ಯತೆ ಇದೆ. ಮರದ ಬುಡ ಕಿತ್ತು ಬಂದಿದ್ದು, ದಿನದಿಂದ ದಿನಕ್ಕೆ ಮರ ಸಂಪೂರ್ಣವಾಗಿ ರಸ್ತೆಗೆ ವಾಲಿಕೊಳ್ಳುತ್ತಿದೆ. ನಾಯಕವಾಡಿ-ಮುಳ್ಳಿಕಟ್ಟೆ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಿದ್ದು ಈ ಸಂದರ್ಭ ಮರ ಉರುಳಿ ಬಿದ್ದರೆ ಅಪಾಯ ಅಲ್ಲಗಳೆಯುವಂತಿಲ್ಲ. ಈ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸಲು ಕಷ್ಟವಾಗುತ್ತಿದ್ದು, ವಾಹನದ ಮೇಲ್ಭಾಗಕ್ಕೆ ಮರ ತಾಗುತ್ತಿದೆ. ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ರಸ್ತೆಗೆ ವಾಲಿಕೊಂಡಿರುವ ಮರವನ್ನು ಅಂದಾಜಿಸಲಾಗದೆ ಹತ್ತಿರಕ್ಕೆ ಬಂದ ಮೇಲೆ ಬ್ರೇಕ್ ಹೊಡೆದು ನಿಲ್ಲಿಸಿ ಬಳಿಕ ಸಂಚರಿಸುತ್ತಿವೆ. ರಸ್ತೆಗೆ ವಾಲಿಕೊಂಡಿರುವ ಈ ಮರದಿಂದ ಒಂದಲ್ಲ ಒಂದು ದಿನ ಅನಾಹುತವಾಗುವ ಸಾಧ್ಯತೆಯಿದ್ದು, ಆದಷ್ಟು ಶೀಘ್ರ ನಾಯಕವಾಡಿ-ಮುಳ್ಳಿಕಟ್ಟೆ ಮುಖ್ಯರಸ್ತೆಯಲ್ಲಿನ ಈ ಬೃಹತ್ ಗಾತ್ರದ ಮರವನ್ನು ತೆರವುಗೊಳಿಸಿ ಮುಂದಾಗುವ ಅನಾಹುತಗಳನ್ನು ತಡೆಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಗಂಗೊಳ್ಳಿ ನಾಯಕವಾಡಿ-ಮುಳ್ಳಿಕಟ್ಟೆ ರಸ್ತೆಯಲ್ಲಿ ವಾಲಿಕೊಂಡಿರುವ ಮರ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮರವನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳಲಾಗುವುದು. ಅರಣ್ಯ ಇಲಾಖೆ ಒಪ್ಪಿಗೆ ನೀಡಿದರೆ ಪಂಚಾಯಿತಿ ಮೂಲಕ ಮರ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ರಾಜು ಪೂಜಾರಿ
ಉಪಾಧ್ಯಕ್ಷರು, ಗುಜ್ಜಾಡಿ ಗ್ರಾಪಂನಾಯಕವಾಡಿ-ಮುಳ್ಳಿಕಟ್ಟೆ ರಸ್ತೆಯಲ್ಲಿ ಮರವೊಂದು ರಸ್ತೆಗೆ ವಾಲಿಕೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಉರುಳಿ ಬೀಳುವ ಸಾಧ್ಯತೆ ಇದೆ. ರಸ್ತೆಯಲ್ಲಿ ವಾಹನಗಳು, ಪಾದಚಾರಿಗಳು ಸದಾ ಸಂಚರಿಸುತ್ತಿದ್ದು, ಈ ಸಂದರ್ಭ ಮರ ಉರುಳಿ ಬಿದ್ದರೆ ಭಾರಿ ಅನಾಹುತವಾಗಲಿದೆ. ಸಮಸ್ಯೆ ಬಗ್ಗೆ ಸ್ಥಳೀಯ ಪಂಚಾಯಿತಿ ಗಮನಕ್ಕೆ ತರಲಾಗಿದ್ದು, ಮಳೆಗಾಲ ಪ್ರಾರಂಭವಾಗುವ ಮೊದಲು ಮರ ತೆರವುಗೊಳಿಸಬೇಕು.
ಪ್ರದೀಪ, ಸ್ಥಳೀಯ ನಿವಾಸಿ