ಚಿಕ್ಕಮಗಳೂರು: ಪ್ರತ್ಯಕ್ಷ, ಪರೋಕ್ಷವಾಗಿ ಒಂದು ಕೋಟಿ ಜನರಿಗೆ ಉದ್ಯೋಗ ನೀಡುವ ಕಾಫಿ ಉದ್ಯಮದ ಉಳಿವಿಗೆ ರಾಜ್ಯ ಬಜೆಟ್ನಲ್ಲಿ ಏನೂ ಕೊಟ್ಟಿಲ್ಲ. ಬಜೆಟ್ನಲ್ಲಿ ಮಲೆನಾಡನ್ನು ಮುಖ್ಯಮಂತ್ರಿ ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಜೆಡಿಎಸ್ ಉಪಾಧ್ಯಕ್ಷ ಬಿ.ಬಿ.ನಿಂಗಯ್ಯ ದೂರಿದರು.
10 ಎಚ್ಪಿವರೆಗಿನ ರೈತರ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುವ ಭರವಸೆ ಹುಸಿಯಾಗಿದೆ. ಚಿಕ್ಕಮಗಳೂರು, ಕೋಲಾರ ಮತ್ತು ಗದಗ ಜಿಲ್ಲೆಗೆ ಬಿಡಿಗಾಸು ನೀಡಿಲ್ಲ. ವಿವಿಧ 16 ನಿಗಮಗಳಿಗೆ ಕೇವಲ 500 ಕೋಟಿ ನೀಡಿದ್ದು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ನಿಗಮಗಳಿಗೆ ಯಥೇಚ್ಛ ಹಣ ನೀಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸೇರಿ ಜಿಲ್ಲೆಯಲ್ಲಿ ಬಿಜೆಪಿ ನಾಲ್ವರು ಶಾಸಕರು, ಓರ್ವ ಸಂಸದೆ, ಎಂಎಲ್ಸಿ ಇದ್ದರೂ ಇವರ್ಯಾರು ಅನುದಾನಕ್ಕೆ ಒತ್ತಾಯಿಸಲಿಲ್ಲವೇ? ಅಥವಾ ಅನುದಾನ ತರುವಲ್ಲಿ ವಿಫಲರಾದರೆ? ಎಂದು ಪ್ರಶ್ನಿಸಿದರು.
ಇನ್ನೂ ಕಾಲ ಮಿಂಚಿಲ್ಲ. ಬಜೆಟ್ನಲ್ಲಿ ಕಾಫಿ ಉದ್ಯಮಕ್ಕೆ ಆಗಿರುವ ಅನ್ಯಾಯವನ್ನು ಪೂರಕ ಬಜೆಟ್ನಲ್ಲಿ ಸರಿಪಡಿಸಲು ಜನಪ್ರತಿನಿಧಿಗಳು ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು. ನಮ್ಮೆಲ್ಲರ ಹೋರಾಟದ ಪರವಾಗಿ ಕಳಸ ತಾಲೂಕು ಅಧಿಕೃತವಾಗಿ ಘೊಷಣೆ ಮಾಡಿರುವುದು ಸ್ವಾಗತಾರ್ಹ ಎಂದರು.
ರಾಜ್ಯದ ವರಮಾನ ಸಂಗ್ರಹದಲ್ಲಿ ಉಂಟಾಗಿರುವ ಕೊರತೆ ನೀಗಿಸಲು ಮುಖ್ಯಮಂತ್ರಿ ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸಿರುವುದೇ ರಾಜ್ಯ ಬಜೆಟ್ ವಿಶೇಷ ಎಂದು ಟೀಕಿಸಿದರು.
14 ಕ್ಕೆ ಜೆಡಿಎಸ್ ಸಭೆ: ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಾ.14 ರಂದು ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆ ನಡೆಯಲಿದ್ದು ಉಸ್ತುವಾರಿ ವೀಕ್ಷಕರು ಆಗಮಿಸಲಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕರಾದ ಶಿವಶಂಕರ್, ವೈಎಸ್ವಿ ದತ್ತ, ಶಾರದಾ ಪೂರ್ಯಾನಾಯ್ಕ ಮತ್ತಿತರರು ಆಗಮಿಸಲಿದ್ದಾರೆ. ಪಕ್ಷದ ನೂತನ ಪದಾಧಿಕಾರಿಗಳ ಆಯ್ಕೆ ಕೂಡ ನಡೆಯಲಿದೆ ಎಂದು ಜಿಲ್ಲಾ ಜೆಡಿಎಸ್ ರಂಜನ್ ಅಜಿತ್ಕುಮಾರ್ ತಿಳಿಸಿದರು.
ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಎಚ್.ಎಸ್.ಮಂಜಪ್ಪ, ಎಂ.ಡಿ.ರಮೇಶ್, ಹೊಲದಗದ್ದೆ ಗಿರೀಶ್, ಲಕ್ಷಣ್ , ತಾಪಂ ಸದಸ್ಯ ಮಹೇಶ್ ಇದ್ದರು.