ದಾವಣಗೆರೆ: ರಾಜಕೀಯ ಸೇವೆಯಾಗಿ ಉಳಿಯದೆ ಉದ್ದಿಮೆಯಾಗಿ ಪರಿವರ್ತನೆಗೊಂಡಿದೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್ ಕಳವಳ ವ್ಯಕ್ತಪಡಿಸಿದರು.
ನಗರದ ಈರುಳ್ಳಿ ಮಾರುಕಟ್ಟೆ ರಸ್ತೆಯಲ್ಲಿನ ಶೇಖರಪ್ಪ ನಗರದ ಮುಖ್ಯ ರಸ್ತೆಯಲ್ಲಿನ ಕಾಮ್ರೇಡ್ ಅಡಿವೆಪ್ಪ ಸಮುದಾಯ ಭವನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ದೇಶ ಸೇವೆ ಮಾಡುವುದಾಗಿ ಹೇಳಿಕೊಂಡು ಬರುವ ರಾಜಕಾರಣಿಗಳು ಭ್ರಷ್ಟಾಚಾರ, ಹಗರಣದಲ್ಲಿ ಮುಳುಗಿ ಹೋಗಿದ್ದಾರೆ. ಆಸ್ತಿಯನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದ್ದಾರೆ. ಪ್ರಜ್ಞಾವಂತ ನಾಗರಿಕರು ರಾಜಕೀಯದ ಬಗ್ಗೆ ಬೇಸತ್ತು ಹೋಗಿದ್ದಾರೆ. ರಾಜಕೀಯವೆಂದರೆ ಸೇವೆಯಲ್ಲ ಅದು ಉದ್ದಿಮೆ ಎನ್ನುವಂತಾಗಿದೆ. ಚುನಾವಣೆ ಕೂಡ ಉದ್ದಿಮೆಯಾಗಿ ಪರಿವರ್ತನೆಗೊಂಡಿದೆ ಎಂದರು.
ಸಮುದಾಯ ಭವನ ಉದ್ಘಾಟಿಸಿದ ಸಿಪಿಐ ರಾಜ್ಯ ಮಂಡಳಿ ಸದಸ್ಯ ಸಾತಿ ಸುಂದರೇಶ್ ಮಾತನಾಡಿ, ಒಂದು ಕಾಲದಲ್ಲಿ ದಾವಣಗೆರೆ ಎಂದರೆ ಹೋರಾಟಗಳ ನಗರ ಎಂದೇ ಖ್ಯಾತಿಯಾಗಿತ್ತು. 50 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿತು. ಅಂತಹ ಗತವೈಭವ ಮರಳಿ ಬರಬೇಕಾಗಿದೆ ಎಂದರು.
ಮುಖಂಡರಾದ ಆನಂದರಾಜ್, ಎಚ್.ಜಿ.ಉಮೇಶ್, ರಾಘವೇಂದ್ರ ನಾಯರಿ, ಟಿ.ಎಸ್. ನಾಗರಾಜ್, ಎಂ.ಬಿ.ಶಾರದಮ್ಮ, ಮಹಮ್ಮದ್ ಬಾಷಾ, ಚಿನ್ನಪ್ಪ, ಆವರಗೆರೆ ವಾಸು, ಆವರಗೆರೆ ಚಂದ್ರು, ಐರಣಿ ಚಂದ್ರು, ನಾಗರಾಜ್, ಎಚ್.ಕೆ. ಕೊಟ್ರಪ್ಪ ಇದ್ದರು.