More

    ಇಂದಿರಾ ಕ್ಯಾಂಟೀನ್​ಗೆ 10 ತಿಂಗಳಿಂದ ಬೀಗ

    ಹಾವೇರಿ: ವಿವಿಧ ಕೆಲಸಗಳಿಗೆ ಬರುತ್ತಿದ್ದ ಬಡಜನರ ಅನುಕೂಲಕ್ಕಾಗಿ ನಗರದಲ್ಲಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಕಳೆದ 10 ತಿಂಗಳಿಂದ ಬಾಗಿಲು ಮುಚ್ಚಿದೆ.

    ನಗರದ ಜಿಲ್ಲಾಸ್ಪತ್ರೆ ಎದುರಿರುವ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ 2018ರಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಬಸ್ ನಿಲ್ದಾಣಕ್ಕೂ ಹತ್ತಿರವಾಗಿದ್ದರಿಂದ ಮಾರುಕಟ್ಟೆ, ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಗಳು, ಸಂತೆ ಮತ್ತು ತರಕಾರಿ ಮಾರುಕಟ್ಟೆಗೆ ಬರುತ್ತಿದ್ದ ರೈತರು, ಆಟೋ ಚಾಲಕರು, ಕೂಲಿ ಕಾರ್ವಿುಕರು ಸೇರಿ ಬಡ ಮಧ್ಯಮ ವರ್ಗದ ಜನರು ಇಂದಿರಾ ಕ್ಯಾಂಟೀನ್​ನಲ್ಲಿ ಅತಿ ಕಡಿಮೆ ದರದಲ್ಲಿ ಊಟ, ತಿಂಡಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

    ನವಪ್ರಯಾಸ ನವದೆಹಲಿ ಸಂಸ್ಥೆ ಗುತ್ತಿಗೆ ಆಧಾರದಲ್ಲಿ ಕ್ಯಾಂಟೀನ್ ನಡೆಸುತ್ತಿತ್ತು. ಸರ್ಕಾರದ ಆದೇಶದಂತೆ ಉಪಾಹಾರಕ್ಕೆ 5 ರೂಪಾಯಿ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 10 ರೂಪಾಯಿ ದರ ನಿಗದಿಪಡಿಸಲಾಗಿತ್ತು. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 52.49 ರೂಪಾಯಿಗೆ ಆಹಾರ ವಿತರಣೆ ಟೆಂಡರ್ ಮಂಜೂರು ಮಾಡಲಾಗಿತ್ತು. ಗ್ರಾಹಕರಿಂದ 25 ಮತ್ತು ಉಳಿದ 27.49 ರೂಪಾಯಿ ಅನ್ನು ರಾಜ್ಯ ಸರ್ಕಾರ ಪಾವತಿಸುತ್ತಿತ್ತು. ಪ್ರತಿ ತಿಂಗಳು ಉಪಾಹಾರ ಮತ್ತು ಊಟ ಸೇವಿಸಿದ ಗ್ರಾಹಕರ ಸಂಖ್ಯೆಯ ಆಧಾರದ ಮೇಲೆ ಬಿಲ್ ಪಾವತಿಸಲಾಗುತ್ತಿತ್ತು. ನಂತರ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯಂದ ಇಂದಿರಾ ಕ್ಯಾಂಟೀನ್ ಬಂದ್ ಆಗಿದೆ. ಕಾರಣ ಬಡಜನರು ಊಟಕ್ಕೆ ಪರದಾಡುವಂತಾಗಿದೆ.

    ಈ ಕುರಿತು ಪ್ರಶ್ನಿಸಿದರೆ, ನಮ್ಮಲ್ಲಿ ಅನುದಾನದ ಕೊರತೆಯಿಲ್ಲ. ಆದರೆ, ಗುತ್ತಿಗೆದಾರರು 6 ತಿಂಗಳ ಬಿಲ್ ಸಲ್ಲಿಸಿಲ್ಲ. ಟೆಂಡರ್ ಪಡೆದ ಗುತ್ತಿಗೆದಾರರು ಉಪಗುತ್ತಿಗೆ ಕೊಟ್ಟಿದ್ದರು. ಸಮರ್ಪಕವಾಗಿ ನಿರ್ವಹಣೆ ಮಾಡದೇ ಬಗ್ಗೆ ಆಗಾಗ್ಗೆ ದೂರುಗಳು ಬಂದವು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ನೋಟಿಸ್ ಕೊಟ್ಟಿದ್ದೇವೆ ಎನ್ನುತ್ತಾರೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು.

    ಕೋವಿಡ್ ಸಮಯದಲ್ಲಿ ಕ್ಯಾಂಟೀನ್​ನಲ್ಲಿ ಊಟ ಕೊಡುತ್ತಿದ್ದೇವು. ಬಡಜನರು ಕೈಮುಗಿದು ಊಟ ಮಾಡಿ ಹೋಗುತ್ತಿದ್ದರು. ಆದರೆ, ಗುತ್ತಿಗೆದಾರರು ಬರುಬರುತ್ತಾ ಕ್ಯಾಂಟೀನ್ ನಡೆಸಲು ನಿರ್ಲಕ್ಷ್ಯ ವಹಿಸಿದರು. ಇದರಿಂದ ಕ್ಯಾಂಟೀನ್​ಗೆ ಬೀಗ ಬಿದ್ದಿದೆ. ಐವರು ಸಿಬ್ಬಂದಿಗೆ 6 ತಿಂಗಳ ಸಂಬಳ ಕೊಟ್ಟಿಲ್ಲ. ನಾವು ನಿರುದ್ಯೋಗಿಗಳಾಗಿದ್ದೇವೆ ಎಂದು ಕ್ಯಾಂಟೀನ್​ನಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅಳಲು ತೋಡಿಕೊಂಡರು.

    ಇಂದಿರಾ ಕ್ಯಾಂಟೀನ್​ಗೆ ಹಾಲು, ತರಕಾರಿ, ಅಕ್ಕಿ, ತೆಂಗಿನಕಾಯಿ ಪೂರೈಸಿದ ವ್ಯಾಪಾರಿಗಳಿಗೆ ಗುತ್ತಿಗೆದಾರರು ಸುಮಾರು 2ಲಕ್ಷ ರೂಪಾಯಿ ಹಣ ಕೊಟ್ಟಿಲ್ಲ. ಅವರೆಲ್ಲರಿಗೂ ಮೋಸವಾಗಿದೆ. ನಮಗೆ ಸಂಬಳ ಕೊಡಿ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ಕೇಳಿದರೆ, ಮೊದಲು ನಿಮ್ಮ ಗುತ್ತಿಗೆದಾರರನ್ನು ಹುಡುಕಿಕೊಂಡು ಬನ್ನಿ ಎಂದು ನೆಪ ಹೇಳುತ್ತಾರೆ. ನಮ್ಮ ಗೋಳನ್ನು ಕೇಳುವವರಿಲ್ಲದಂತಾಗಿದೆ ಎಂದು ದೂರಿದರು.

    ಒಟ್ಟಾರೆ ಬಡವರ ಪಾಲಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್ ಮುಚ್ಚಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೆ ಕ್ಯಾಂಟೀನ್ ಆರಂಭಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ಜಿಲ್ಲೆಯಲ್ಲಿರುವ ಎಲ್ಲ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕಾರ್ಯಾದೇಶ ನೀಡಿ ತ್ವರಿತವಾಗಿ ಕಾರ್ಯಾರಂಭಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

    | ಸಂಜಯ ಶೆಟ್ಟಣ್ಣವರ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts