ದುಬೈ: ಭಾರತದ ನಿತಿನ್ ಮೆನನ್ ಐಸಿಸಿಯ ಎಲೈಟ್ ಪ್ಯಾನೆಲ್ ಅಂಪೈರ್ಗಳ ಪಟ್ಟಿಯಲ್ಲಿ ಸತತ 5ನೇ ವರ್ಷವೂ ಸ್ಥಾನ ಪಡೆದಿದ್ದಾರೆ. ಬಾಂಗ್ಲಾದೇಶದ ಅಂಪೈರ್ ಶುರ್ದೌಲಾ ಇಬ್ನೆ ಶಾಹಿದ್ ಮೊದಲ ಬಾರಿಗೆ ಎಲೈಟ್ ಪ್ಯಾನೆಲ್ನಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಇಂದೋರ್ ಮೂಲದ ನಿತಿನ್ ಮೆನನ್ 2020ರಲ್ಲಿ ಮೊದಲ ಬಾರಿಗೆ ಎಲೈಟ್ ಪ್ಯಾನೆಲ್ನಲ್ಲಿ ಸ್ಥಾನ ಪಡೆದಿದ್ದರು. 12 ಅಂಪೈರ್ಗಳ ಈ ಪ್ಯಾನೆಲ್ನಲ್ಲಿ ಅವರು ಏಕೈಕ ಭಾರತೀಯರಾಗಿದ್ದಾರೆ.
ಎಸ್. ವೆಂಕಟರಾವನ್ ಮತ್ತು ಎಸ್. ರವಿ ಬಳಿಕ ಎಲೈಟ್ ಪ್ಯಾನೆಲ್ನಲ್ಲಿ ಸ್ಥಾನ ಪಡೆದಿರುವ 3ನೇ ಭಾರತೀಯರೆಂಬ ಹೆಗ್ಗಳಿಕೆ 40 ವರ್ಷದ ನಿತಿನ್ ಮೆನನ್ ಅವರದು. ನಿತಿನ್ ಇದುವರೆಗೆ 23 ಟೆಸ್ಟ್, 58 ಏಕದಿನ ಮತ್ತು 41 ಟಿ20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ (125) ಕಾರ್ಯನಿರ್ವಹಿಸಿದ ಭಾರತೀಯ ಅಂಪೈರ್ ಎಂಬ ಹೆಗ್ಗಳಿಕೆ ಸದ್ಯ ಎಸ್. ವೆಂಕಟರಾವನ್ ಹೆಸರಿನಲ್ಲಿದ್ದು, ಮುಂಬರುವ ಟಿ20 ವಿಶ್ವಕಪ್ನಲ್ಲಿ ಈ ದಾಖಲೆ ಮುರಿಯುವ ಅವಕಾಶ ನಿತಿನ್ ಮೆನನ್ಗೆ (122) ಲಭಿಸಲಿದೆ. ಕಳೆದ ವರ್ಷ ಅವರು ಪ್ರತಿಷ್ಠಿತ ಆಶಸ್ ಸರಣಿಯಲ್ಲೂ ಕಾರ್ಯನಿರ್ವಹಿಸಿದ್ದರು.
2006ರಿಂದ ಅಂತಾರಾಷ್ಟ್ರೀಯ ಅಂಪೈರ್ಗಳ ಪ್ಯಾನೆಲ್ನಲ್ಲಿದ್ದ ಶುರ್ದೌಲಾ ಮೊದಲ ಬಾರಿಗೆ ಎಲೈಟ್ ಪ್ಯಾನೆಲ್ನಲ್ಲಿ ಸ್ಥಾನ ಪಡೆದಿದ್ದಾರೆ. ಐಸಿಸಿ ಮ್ಯಾಚ್ ರೆಫ್ರಿಗಳ ಎಲೈಟ್ ಪ್ಯಾನೆಲ್ ಸದಸ್ಯರ ಸಂಖ್ಯೆಯನ್ನು 7ರಿಂದ 6ಕ್ಕೆ ಇಳಿಸಲಾಗಿದ್ದು, ಇಂಗ್ಲೆಂಡ್ನ ಕ್ರಿಸ್ ಬ್ರಾಡ್ ಹೊರಬಿದ್ದಿದ್ದಾರೆ. ಟೀಮ್ ಇಂಡಿಯಾ ಮಾಜಿ ವೇಗಿ ಹಾಗೂ ಕನ್ನಡಿಗ ಜಾವಗಲ್ ಶ್ರೀನಾಥ್ ಮ್ಯಾಚ್ ರೆಫ್ರಿಗಳ ಎಲೈಟ್ ಪ್ಯಾನೆಲ್ನಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ.