ನವದೆಹಲಿ: ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ ಎಂಬ ಗಾದೆಮಾತಿದೆ. ಆದರೆ ಇಲ್ಲೊಂದು ಕಡೆಯಂತೂ ನಾಯಿ ಬೊಗಳಿದ್ದಕ್ಕೆ ಕೊಲೆಯೇ ಆಗಿಹೋಗಿದೆ. ಅದೂ ಭಾರತೀಯನೊಬ್ಬ ಆಸ್ಟ್ರೇಲಿಯಾದ ಮಹಿಳೆಯನ್ನು ಹೀಗೊಂದು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದಾನೆ.
ರಾಜ್ವಿಂದರ್ ಸಿಂಗ್ (38) ಕೊಲೆ ಆರೋಪಿ, 24 ವರ್ಷದ ಟೊಯಾಹ್ ಕಾರ್ಡಿಂಗ್ಲೆ ಕೊಲೆಗೀಡಾದ ಯುವತಿ. ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ವ್ಯಾಂಗೆಟ್ಟಿ ಬೀಚ್ ಬಳಿ ಈ ಕೊಲೆ ನಡೆದಿದೆ. ಹೆಂಡತಿಯೊಂದಿಗೆ ಜಗಳವಾಡಿಕೊಂಡು ಮನೆಯಿಂದ ಹೊರಗೆ ಬಂದಿದ್ದ ರಾಜ್ವಿಂದರ್ ಸಿಂಗ್ ಈ ಕೃತ್ಯವೆಸಗಿದ್ದಾನೆ.
ಟೊಯಾಹ್ ತನ್ನ ನಾಯಿಯೊಂದಿಗೆ ಕಡಲ ಕಿನಾರೆಯಲ್ಲಿ ವಾಕ್ ಮಾಡುತ್ತಿದ್ದಾಗ, ಪತ್ನಿಯೊಂದಿಗೆ ಜಗಳವಾಡಿಕೊಂಡು ಸಿಟ್ಟಿನಲ್ಲಿ ಹೊರಗೆ ಬಂದಿದ್ದ ರಾಜ್ವಿಂದರ್ ಸಿಂಗ್ನನ್ನು ನೋಡಿ, ಆ ನಾಯಿ ಬೊಗಳಿತ್ತು. ಇದರಿಂದ ಸಿಟ್ಟಾದ ರಾಜ್ವಿಂದರ್ ಸಿಂಗ್ ಮತ್ತು ಟೊಯಾಹ್ ಮಧ್ಯೆ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತೆರಳಿ ರಾಜ್ವಿಂದರ್ ಆಕೆಯನ್ನು ಕೊಂದು, ಮರಳಿನಲ್ಲಿ ಹೂತು, ನಾಯಿಯನ್ನು ಅಲ್ಲಿದ್ದ ಮರಕ್ಕೆ ಕಟ್ಟು ಹಾಕಿದ್ದ. ಅಂದಹಾಗೆ ಈ ಪ್ರಕರಣ 2018ರಲ್ಲಿ ನಡೆದಿತ್ತು.
ಕೊಲೆ ಮಾಡಿದ ಎರಡೇ ದಿನದಲ್ಲಿ ಭಾರತಕ್ಕೆ ಬಂದು ತಲೆಮರೆಸಿಕೊಂಡಿದ್ದ ರಾಜ್ವಿಂದರ್ ಸಿಂಗ್ ಕುರಿತ ಸುಳಿವು ನೀಡಿದವರಿಗೆ 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಕೊಡುವುದಾಗಿ ಕ್ವೀನ್ಸ್ಲ್ಯಾಂಡ್ ಪೊಲೀಸರು ಘೋಷಣೆ ಮಾಡಿದ್ದರು. ರಾಜ್ವಿಂದರ್ ಸಿಂಗ್ ಬಂಧನದ ಬಗ್ಗೆ ದೆಹಲಿ ಪೊಲೀಸರು ಶುಕ್ರವಾರ ಘೋಷಣೆ ಮಾಡಿದ್ದು, ಈ ಮೂಲಕ ನಾಲ್ಕು ವರ್ಷಗಳ ಪ್ರಕರಣ ಭೇದಿಸಿದಂತಾಗಿದೆ. ಪತ್ನಿ ಜತೆ ಜಗಳ ಮಾಡಿಕೊಂಡು ಹೊರಗೆ ಬರುವಾಗ ಒಂದಷ್ಟು ಹಣ್ಣು ಹಾಗೂ ಅಡುಗೆ ಮನೆಯಿಂದ ಚಾಕು ಹಿಡಿದುಕೊಂಡು ಬಂದಿದ್ದಾಗಿ ರಾಜ್ವಿಂದರ್ ಸಿಂಗ್ ವಿಚಾರಣೆ ವೇಳೆ ಹೇಳಿದ್ದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕುತ್ತಿಗೆಗೆ ಚುಚ್ಚಿಕೊಂಡಿದ್ದ ತ್ರಿಶೂಲಸಹಿತ ಶಸ್ತ್ರಚಿಕಿತ್ಸೆಗಾಗಿ 65 ಕಿಲೋಮೀಟರ್ ಪ್ರಯಾಣಿಸಿದ ಭೂಪ!
ನಾಡಿದ್ದೇ ಚಲಾವಣೆಗೆ ಬರಲಿದೆ ಡಿಜಿಟಲ್ ಕರೆನ್ಸಿ; ಪ್ರಾಯೋಗಿಕವಾಗಿ ಎಲ್ಲೆಲ್ಲಿ ಜಾರಿ?
ಸಂಭ್ರಮದ ಸಾವು: ಮದುವೆ ಸಮಾರಂಭದಲ್ಲಿ ಕುಣಿಯುತ್ತ ಕುಣಿಯುತ್ತ ಕುಸಿದು ಬಿದ್ದು ಪ್ರಾಣ ಕಳ್ಕೊಂಡ!